ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ನಾಡೋಜ ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಮೂರು ರಾಜಕೀಯ ಪಕ್ಷಗಳ ನಾಯಕರ ಸಮಾಗಮಕ್ಕೆ ಸಾಕ್ಷಿಯಾಗಿತ್ತು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮೂವರು ಅಕ್ಕಪಕ್ಕದಲ್ಲಿ ಕುಳಿತು ವೇದಿಕೆ ಹಂಚಿಕೊಂಡರು. ಅಲ್ಲದೇ ಕಾರ್ಯಕ್ರಮವನ್ನು ಮೂವರು ನಾಯಕರು ಒಟ್ಟಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, “ನನ್ನ ಬಗ್ಗೆ, ದೇವೆಗೌಡರ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಗೊತ್ತಿಲ್ಲದಿದ್ದರೆ ಪ್ರಧಾನಿ ಮೋದಿಯವರನ್ನು ಕೇಳಿ ತಿಳಿದುಕೊಳ್ಳುವಂತೆ,” ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗಿದರು. “ದೇಶವನ್ನು ಆಳುತ್ತಿರುವ ಪಕ್ಷ ಅದರಲ್ಲೂ ಎರಡನೇ ಬಾರಿಗೆ ದೇಶವನ್ನು ಆಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು,” ಆಗ್ರಹಿಸಿದರು.
“ಇನ್ನೂ ಬಿಜೆಪಿ ಪಕ್ಷದ ಮುಖಂಡರು ನನಗೆ ಬುದ್ಧಿ ಹೇಳುವ ಮೊದಲು ಅವರ ನಡುವಳಿಕೆ ಏನೆಂಬುದನ್ನು ನೋಡಿಕೊಳ್ಳಲಿ, ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಲಿ ಪ್ರಧಾನಮಂತ್ರಿ ಹತ್ತಿರ ಕೇಳಿ ತಿಳಿದುಕೊಳ್ಳಲಿ,” ಎಂದು ಬಿಜೆಪಿ ಉಸ್ತುವಾರಿ ವಿರುದ್ಧ ಎಚ್ಡಿಕೆ ಹರಿಹಾಯ್ದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ತೈಲ ಬೆಲೆ ವಿಪರೀತ ಏರಿಕೆಯಾಗುತ್ತಿರುವ ಬಗ್ಗೆ ಜನರು ಅರ್ಥ ಮಾಡಿಕೊಳ್ಳಲಿ, ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳು ಬಡ ಜನರ ಮೇಲೆ ಹೊರೆ ಏರಿಕೆ ಮಾಡಿದ್ದಾರೆ,” ಎಂದು ಆರೋಪಿಸಿದರು.”ಸರ್ಕಾರಗಳಿಗೆ ಕೂಲಿ ಕಾರ್ಮಿಕ ಕೂಡ ವರ್ಷಕ್ಕೆ ಒಂದು ಲಕ್ಷ ತೆರಿಗೆ ಕಟ್ಟುತ್ತಾನೆ. ಆದರೆ ಬಿಜೆಪಿ ಸರ್ಕಾರ ನಾಡಿನ ಬಡವರಿಗೆ ನೀಡುತ್ತಿರುವ ಕೊಡುಗೆ ಇದೇನಾ?,” ಎಂದು ಪ್ರಶ್ನಿಸಿದರು.
“ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಎಚ್ಡಿಕೆ, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಮ್ಯಾಪ್ ಇದೆಯೋ, ಕಿತ್ತಾಕಿದರೋ ಗೊತ್ತಿಲ್ಲ. ರಾಜ್ಯಕ್ಕೆ ಏನು ತೊಂದರೆ ಆಗುತ್ತಿದೆ, ಅನ್ಯಾಯವಾಗಿದೆ ಎಂಬುದುನ್ನು ಉಸ್ತುವಾರಿಗಳು ಗಮನಿಸಿ ಪರಿಹಾರ ಒದಗಿಸಬೇಕು. ಬರೀ ಪಕ್ಷ ಸಂಘಟನೆ ಮಾಡುವುದಲ್ಲ,” ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.