ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ
ಕರ್ನೂಲ್ ಜಿಲ್ಲೆಯ ಚಿನ್ನಟೇಕೂರು ಗ್ರಾಮದ ಬಳಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೋ ಬಸ್ ಭೀಕರ ಬೆಂಕಿಗಾಹುತಿಯಾದ ದುರಂತ ನಡೆದಿದೆ. 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಈ ದುರಂತ ಸಂಭವಿಸಿದೆ.
ವೋಲ್ವೋ ಬಸ್ ಮೊದಲು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಆ ಡಿಕ್ಕಿಯ ಬಳಿಕ ಬಸ್ ನಿಲ್ಲಿಸದೆ ಮುಂದಕ್ಕೆ ಸಾಗಿದ ಪರಿಣಾಮ ಬೈಕ್ ಬಸ್ನ ಅಡಿಯಲ್ಲಿ ಸಿಲುಕಿದೆ. ಬೈಕ್ ನೆಲಕ್ಕೆ ಉಜ್ಜಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಅದು ಕ್ಷಣಾರ್ಧದಲ್ಲೇ ಇಡೀ ಬಸ್ಸಿಗೆ ವ್ಯಾಪಿಸಿದೆ. ಬೈಕ್ ಸವಾರ ಕೂಡ ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತ ಸಂಭವಿಸಿದ ವೇಳೆ ಬಹುತೇಕ ಪ್ರಯಾಣಿಕರು ನಿದ್ರೆಯಲ್ಲಿದ್ದರು. ಬಸ್ ಚಾಲಕ ಬದಲಿ ಚಾಲಕನ ಸಹಾಯದಿಂದ ಪ್ರಯಾಣಿಕರನ್ನು ಕೆಳಗಿಳಿಸುವ ಪ್ರಯತ್ನ ಮಾಡಿದರೂ, ಬೆಂಕಿಯ ವೇಗ ಅಷ್ಟೊಂದು ತೀವ್ರವಾಗಿತ್ತು ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.
ವೋಲ್ವೋ ಬಸ್ ಆದ ಕಾರಣದಿಂದ ಬೆಂಕಿ ಕ್ಷಣಗಳಲ್ಲಿ ಹರಡಿದ್ದು, ಕಿಟಕಿಗಳು ಮುಚ್ಚಿದ್ದರಿಂದ ಅನೇಕರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಕೆಲವರು ಕಿಟಕಿಗಳನ್ನು ಒಡೆದು ಹೊರಬಂದರೂ, ಅನೇಕರಿಗೆ ಉಸಿರುಗಟ್ಟಿಕೊಂಡು ಸಾವನ್ನಪ್ಪಿದ ಶಂಕೆ ಇದೆ.
ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಒಳಗೆ ಸಿಕ್ಕಿಹಾಕಿಕೊಂಡವರ ಶವಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ. ಸಾವಿನ ನಿಖರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ.






