ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು
ಭಾರತೀಯ ಅಡುಗೆ ಮನೆಗಳಲ್ಲಿ ಕಾಣಸಿಗುವ ಮಸಾಲೆ ಪದಾರ್ಥಗಳಲ್ಲಿ ಈ ಕರಿಮೆಣಸು ಅಥವಾ ಕಾಳುಮೆಣಸು ಕೂಡ ಒಂದು. ಸಾಂಬಾರ ಪದಾರ್ಥಗಳ ರಾಜ ಎನ್ನಲಾಗುವ ಕಾಳು ಮೆಣಸು ಅಡುಗೆಯಲ್ಲಿ ಬಳಸುವ ಮುಖ್ಯವಾದ ಮಸಾಲೆ ಪದಾರ್ಥವಾಗಿದೆ. ಆಯುರ್ವೇದದಲ್ಲಿ ಔಷಧಕ್ಕಾಗಿ ಬಳಸುವ ಈ ಕಾಳು ಮೆಣಸಿನಲ್ಲಿ ಕ್ಯಾಲ್ಶಿಯಂ, ಸೋಡಿಯಂ, ಪೊಟ್ಯಾಶಿಯಂ, ವಿಟಾಮಿನ್ ಎ, ವಿಟಮಿನ್ ಕೆ ಸೇರಿದಂತೆ ಹಲವಾರು ಪೋಷಕಾಂಶಗಳು ಹೇರಳವಾಗಿವೆ. ಕಾಳು ಮೆಣಸಿನಿಂದ ಮನೆ ಮದ್ದನ್ನು ತಯಾರಿಸಿ ಸೇವಿಸುವುದರಿಂದ ನಾನಾ ರೀತಿಯ ರೋಗ ರುಜಿನಗಳು ಶಮನವಾಗುತ್ತದೆ.
ಕಾಳು ಮೆಣಸು ಅಥವಾ ಕರಿಮೆಣಸು ಇದೊಂದು ಮಸಾಲೆ ಪದಾರ್ಥವಾಗಿದ್ದು, ಆಯುರ್ವೇದ ದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕಾಳು ಮೆಣಸು ದೇಹಕ್ಕೆ ಉಷ್ಣವನ್ನುಂಟು ಮಾಡುವಂತಹದ್ದು. ಇದನ್ನು ಯಾವೆಲ್ಲಾ ಕಾಯಿಲೆಗಳಿಗೆ ಮನೆಮದ್ದುಗಳಾಗಿ ಬಳಸಬಹುದು ಎನ್ನುವುದನ್ನು ಡಾ. ಮಂಜುನಾಥ್ ಡಿ. ನಾಯಕ್ ತಿಳಿಸಿದ್ದಾರೆ. ದಿನಕ್ಕೆ ಒಂದರಿಂದ ಎರಡು ಗ್ರಾಂ ಕಾಳು ಮೆಣಸನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಅಸ್ತಮಾ:-
ಕಾಳು ಮೆಣಸಿಗೆ ಚಕ್ಕೆ ಸೇರಿಸಿ ಪುಡಿಮಾಡಿ ಹಾಲಿಗೆ ಹಾಕಿ ಕುದಿಸಿ ಅದನ್ನು ಬೆಳಗ್ಗೆ ಹಾಗೂ ರಾತ್ರಿ ಸೇವಿಸಬೇಕು. ಇದರಿಂದ ಶ್ವಾಸಕೋಶದ ಸಮಸ್ಯೆ ಅಂದರೆ ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ.
ಕೆಮ್ಮು ನಿವಾರಣೆ:-
ಕೆಮ್ಮು ಕಾಳು ಮೆಣಸಿನ ಜೊತೆ ಕಲ್ಲುಪ್ಪು ಸೇರಿಸಿ ಜಗಿದು ಸೇವಿಸಬೇಕು ಇದರಿಂದ ಕೆಮ್ಮು ನಿವಾರಣೆಯಾಗುವುದಲ್ಲದೆ, ಗಂಟಲು ನೋವು ಕೂಡಾ ನಿವಾರಣೆಯಾಗುತ್ತದೆ. ಇನ್ನು ಮಕ್ಕಳಿಗೆ ಕಾಳು ಮೆಣಸಿನ ಪುಡಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಸೇವಿಸಲು ಕೊಡಿ. ಇದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.
ಪಿತ್ತಗಂದಿಗಳ ನಿವಾರಣೆ:-
ಕಾಳು ಮೆಣಸನ್ನು ಪುಡಿ ಮಾಡಿ ದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ರ್ಯಾಶಸ್ ಆಗಿರುವ ಜಾಗದಲ್ಲಿ ಇದನ್ನುಹಚ್ಚೋದ್ರಿಂದ ನಿವಾರಣೆಯಾಗುತ್ತದೆ. ಇದನ್ನು ಹಚ್ಚುವಾಗ ಸ್ವಲ್ಪ ಉರಿ ಕಾಣಿಸಿಕೊಳ್ಳಬಹುದು. ಕ್ರಮೇಣ ಇದು ನಿವಾರಣೆಯಾಗುತ್ತದೆ.
ಸೈನಸೈಟಿಸ್ ಸಮಸ್ಯೆ ನಿವಾರಣೆಗೆ:-
ಕಾಳು ಮೆಣಸಿಗೆ ಅರ್ಧ ಚಮಚ ಜೇನುತುಪ್ಪ, ತುಳಸಿ, ೧ ಚಮಚ ದೊಡ್ಡಪತ್ರೆಯ ರಸವನ್ನು ಸೇರಿಸಿ ಸೇವಿಸಿ ಸೈನಸೈಟಿಸ್ ನಿವಾರಣೆಯಾಗುತ್ತದೆ. ನಿಮಗೆ ಸೀನುವ ಸಮಸ್ಯೆ ಇದ್ದರೆ ಇದಕ್ಕೆ ಚಿಟಿಕೆ ಅರಿಶಿನ ಸೇರಿಸಿ ಸೇವಿಸಬಹುದು. ಇದನ್ನು ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ತೆಗೆದುಕೊಳ್ಳಬೇಕು.
ಹಸಿವು ಉಂಟಾಗುತ್ತದೆ:-
ಹೆಚ್ಚಿನವರು ಸಾರು, ರಸಂ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ಕಾಳು ಮೆಣಸನ್ನು ಬಳಸುತ್ತಾರೆ. ಇದರಿಂದರಿಂದ ಹಸಿವು ಚೆನ್ನಾಗಿ ಆಗುತ್ತದೆ. ಮಕ್ಕಳಿಗೆ ಒಂದು ಕಾಳು ಮೆಣಸನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಶುಂಠಿ ರಸ ಸೇರಿಸಿ, ಬೇಕಾದ್ರೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಲು ಕೊಡಿ. ಇದರಿಂದ ಮಕ್ಕಳಲ್ಲಿ ಹಸಿವು ಹೆಚ್ಚಾಗುತ್ತದೆ.
ಹಲ್ಲು ನೋವಿನ ನಿವಾರಣೆಗೆ:-
ಕಾಳು ಮೆಣಸಿಗೆ ಸ್ವಲ್ಪ ಲವಂಗ ಸೇರಿಸಿ ಜಜ್ಜಿ ಉಂಡೆ ಮಾಡಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟರೆ ಕ್ರಮೇಣ ಹಲ್ಲು ನೋವು ನಿವಾರಣೆಯಾಗುತ್ತದೆ.
ಯಾರು ಸೇವಿಸಬಾರದು:-
ಬಾಯಿಹುಣ್ಣು, ಮೂಗಿನಲ್ಲಿ ರಕ್ತ ಸೋರಿಕೆ, ಮೂಲವ್ಯಾಧಿ, ಉಷ್ಣತೆಯಿದ್ದಲ್ಲಿ, ಮೈಯಲ್ಲಿ ಗುಳ್ಳೆಗಳಾಗಿದ್ದಲ್ಲಿ ಅಂತಹವರು ಕಾಳು ಮೆಣಸನ್ನು ಸೇವಿಸಬಾರದು.






