ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು ಕಿರುಕುಳವೇ ಕಾರಣ – ವಿಚಾರಣೆಯಲ್ಲಿ ಸತ್ಯ ಬಯಲು
ಬೆಂಗಳೂರು: ಕೆ.ಆರ್.ಪುರಂನಲ್ಲಿ ಯುವತಿ ವಿಚಾರಕ್ಕೆ ಸಂಬಂಧಿಸಿ ನಡೆದಿತ್ತು ಎನ್ನಲಾದ ಚಾಕು ಇರಿತ ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ವಾಸಿಂ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಚಾಕು ಇರಿತಕ್ಕೊಳಗಾದ ರೋಷನ್ ಎಂಬಾತನ ಕಳ್ಳಾಟ ಹಾಗೂ ಕಿರುಕುಳದ ವಿಚಾರಗಳು ಬೆಳಕಿಗೆ ಬಂದಿವೆ. ಯುವತಿ ವಿಚಾರಕ್ಕಿಂತಲೂ ಹೆಚ್ಚಾಗಿ, ರೋಷನ್ ಏರಿಯಾದಲ್ಲಿ ವಾಸಿಂ ಸೇರಿದಂತೆ ಹಲವಾರು ಯುವಕರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಏರಿಯಾದಲ್ಲಿ ಹವಾ ಮೆಂಟೇನ್ ಮಾಡುತ್ತಿದ್ದ ರೋಷನ್, ಬೈಕ್ನಲ್ಲಿ ಬರುತ್ತಿದ್ದ ಯುವಕರಿಂದ ಬೈಕ್ ಕಿತ್ತುಕೊಂಡು ಹೋಗುವುದು, ಬೈಕ್ ಬೇಕಾದರೆ ಹಣ ಕೊಡಬೇಕು ಎಂದು ಬೆದರಿಕೆ ಹಾಕುತ್ತಿದ್ದನೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಇದರಿಂದ ಬೇಸತ್ತ ವಾಸಿಂ, ಅಸೀಫ್, ಖಲೀಮ್ ಹಾಗೂ ಅವರ ಸ್ನೇಹಿತರು ಆತನ ವಿರುದ್ಧ ಅಸಮಾಧಾನ ಹೊಂದಿದ್ದರು. ಇದೇ ತಿಂಗಳ 2ನೇ ತಾರೀಖು ರಾತ್ರಿ ಅಸೀಫ್ ಎನ್ಫೀಲ್ಡ್ ಬೈಕ್ ಅನ್ನು ರೋಷನ್ ಕಿತ್ತುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ವಿಷಯವನ್ನು ಅಸೀಫ್ ತನ್ನ ಸಹೋದರ ವಾಸಿಂಗೆ ತಿಳಿಸಿದ್ದ.
ಇದೇ ಸಂದರ್ಭದಲ್ಲಿ ವಾಸಿಂ ಮತ್ತು ರೋಷನ್ ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದ ಹಿನ್ನೆಲೆ ಮನಸ್ತಾಪವೂ ಇತ್ತು ಎನ್ನಲಾಗಿದೆ. ಬೈಕ್ ವಿಚಾರ ಕೇಳಲು ರೋಷನ್ ಬಳಿ ಹೋಗಿದ್ದ ವಾಸಿಂನೊಂದಿಗೆ ಜಗಳ ಉಂಟಾಗಿದೆ. ಜಗಳದ ವೇಳೆ ರೋಷನ್ ಚಾಕು ತೆಗೆದಿದ್ದು, ಅದನ್ನು ವಾಸಿಂ ಕೈಯಿಂದ ಕಸಿದುಕೊಂಡು ಚುಚ್ಚಿದ್ದಾನೆ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಕೆ.ಆರ್.ಪುರಂ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.






