ಕ್ರೇಜಿಸ್ಟಾರ್ ರವಿಚಂದ್ರನ್ ಚಂದನವನಕ್ಕೆ ಹೊಸ ರೂಪ, ಹೊಸ ಆಯಾಮ ನೀಡಿದ ನಟ, ನಿರ್ದೇಶಕ. ಒಂದು ರೀತಿಯ ಮಡಿವಂತಿಕೆ, ನಿರ್ಧಿಷ್ಟ ಚೌಕಟ್ಟನ್ನು ಮೀರಿ ಸ್ಯಾಂಡಲ್ವುಡ್ಗೆ ಹೊಸ ಬಾಷ್ಯ ಬರೆದ ಕನಸುಗಾರ ರವಿಚಂದ್ರನ್. ಕನ್ನಡದ ಹೆಮ್ಮೆಯ ಕ್ರೇಜಿಸ್ಟಾರ್ ಸಿನಿಮಾಗಳು ಸದಾ ಹೊಸತನದಿಂದಲೇ ಕೂಡಿರುತ್ತವೆ. ರವಿಚಂದ್ರನ್ ಏನೇ ಮಾಡಿದರೂ ಅದರಲ್ಲಿ ವಿಭಿನ್ನತೆ ಇರುತ್ತದೆ. ರವಿಚಂದ್ರನ್ ಎಂದರೆಯೇ ಹಾಗೆ ಹೊಸತನದ ಪ್ರತೀಕ.
ರವಿಚಂದ್ರನ್ ಅವರ ನಟನೆಯ ದಶರಥ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ಕ್ರೇಜಿಸ್ಟಾರ್ ಮಿಂಚಿದ್ದಾರೆ. ರವಿಮಾಮನ ಕೃಷ್ಣಾವತಾರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇದೀಗ ರವಿಚಂದ್ರನ್ ರವಿ ಬೋಪಣ್ಣ ಎನ್ನುವ ಸಿನಿಮಾ ಮಾಡ್ತಿದ್ದಾರೆ. ರವಿಚಂದ್ರನ್ ಅವರೇ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದು ಗೆಸ್ಟ್ ರೋಲ್ನಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ರವಿ ಬೋಪಣ್ಣ ಸಿನಿಮಾ ಬಗ್ಗೆ ರವಿಚಂದ್ರನ್ ಪ್ರೆಸ್ ಮೀಟ್ ಮಾಡಿದ್ದರು. ಆ ವೇಳೆ ತನ್ನ ಚಿತ್ರಕ್ಕೆ ಸುದೀಪ್ ಅವರನ್ನು ಕೇಳಿದ್ದೇನೆ. ಇಡೀ ಸಿನಿಮಾಕ್ಕೆ ಟ್ವಿಸ್ಟ್ ಕೊಡುವ ಪಾತ್ರ ಸುದೀಪ್ ಅವರದ್ದು. ಅವನು ಏನೂ ಮರು ಮಾತಾಡದೆ ಸಿನಿಮಾಕ್ಕೆ ಓಕೆ ಅಂದಿದ್ದಾನೆ. ನನ್ನ ಹಿರಿಯ ಮಗನಂತೆ ಅವನು. ಸುದೀಪ್ ಮಾಡ್ತಾನೆ ಅಂದರೆ ಆ ಪಾತ್ರಕ್ಕೆ ಒಂದು ತೂಕ ಇರಬೇಕು. ಹಾಗಾಗಿ ಒಂದೊಳ್ಳೆ ಪಾತ್ರಕ್ಕೆ ಸುದೀಪ್ರನ್ನು ಕೇಳಿಕೊಂಡಿದ್ದೇನೆ ಎಂದು ರವಿಚಂದ್ರನ್ ಹೇಳಿದ್ದರು.
ಈಗ ರವಿ ಬೋಪಣ್ಣ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂದು ಶೂಟಿಂಗ್ ನಡೆಯಲಿದ್ದು, ಈ ಚಿತ್ರೀಕರಣದಲ್ಲಿ ಸುದೀಪ್ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ರವಿಚಂದ್ರನ್ ಅವರ ರವಿ ಬೋಪಣ್ಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅವರ ಪಾತ್ರ ಏನೆಂಬುದು ರಿವೀಲ್ ಆಗಲಿದೆ.