ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿರುವ ನಾಡ ಅಧಿದೇವತೆ ಚಾಮುಂಡೇಶ್ವರಿ ದೇಗುಲದ ಆದಾಯದಲ್ಲಿ ಈ ಬಾರಿ ಇಳಿಕೆಯಾಗಿದೆ. ಪ್ರತಿ ಬಾರಿ ತಾಯಿ ಚಾಮುಂಡೇಶ್ವರಿ ದೇಗುಲದ ಭಕ್ತರ ಹುಂಡಿಯ ಹಣ ಕೋಟಿ ರೂ ದಾಟುತ್ತಿತ್ತು. ಆದರೆ ಈಗ ಸುಮಾರು 18 ಲಕ್ಷರೂಗಳಷ್ಟು ಆದಾಯ ಇಳಿಕೆಯಾಗಿದೆ.
ದೇವಸ್ಥಾನದಲ್ಲಿ ಹುಂಡಿಹಣ ಎಣಿಕೆ ಕಾರ್ಯ ನಡೆದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ 82,16,754 ರೂ. ಸಂಗ್ರಹವಾಗಿದೆ. ಇದರಲ್ಲಿ 2 ಸಾವಿರ ಮುಖ ಬೆಲೆಯ 81 ನೋಟುಗಳು. ಐನೂರು ಮುಖ ಬೆಲೆಯ 6754 ನೋಟುಗಳು. ಇನ್ನೂರು ಮುಖಬೆಲೆಯ 2291 ನೋಟುಗಳು. ನೂರು ರೂ. ಮುಖಬೆಲೆಯ 26,048 ನೋಟುಗಳು, ನಾಣ್ಯಗಳು ಸೇರಿದಂತೆ ಒಟ್ಟು 82,16,754 ರೂ. ಸಂಗ್ರಹವಾಗಿದೆ.
ಕೊರೊನಾ 3ನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ವಾರಾಂತ್ಯ ಹಾಗೂ ಸರ್ಕಾರಿ ರಜೆ ದಿನ, ಹಬ್ಬಗಳಂದು ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ದೇವಸ್ಥಾನಕ್ಕೆ ಬರುತ್ತಿದ್ದ ಆದಾಯ ಕುಸಿತ ಕಂಡಿದೆ.