ಚೊಂಬು ಹಿಡಿದು ಎಎಪಿ ಪ್ರತಿಭಟನೆ !

tnit editors
1 Min Read

ಬೆಂಗಳೂರು: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಮತದಾರರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ರಾಜ್ಯದ ಯಾವುದೇ ಯೋಜನೆಗೆ ಕೇಂದ್ರ ಸರ್ಕಾರ ಒಂದೇ ಒಂದು ಪೈಸೆಯನ್ನು ಕೊಟ್ಟಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ದಾಸರಿ, ರಾಜ್ಯಕ್ಕೆ ಏನು ಸಿಗುತ್ತದೆ ಎಂದು ಕಾದಿದ್ದ ಮತದಾರನಿಗೆ ನಿರ್ಮಲಾ ಸೀತಾರಾಮನ್‌ ಅವರು ಚೊಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಕಳಸಾ ಬಂಡೂರಿ ಯೋಜನೆ, ಮಹದಾಯಿ ಯೋಜನೆ, ಎತ್ತಿನಹೊಳೆ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆಯಂತಹ ಪ್ರಮುಖ ನೀರಾವರಿ ಯೋಜನೆಗಳಿಗೆ ಒಂದೇ ಒಂದು ಪೈಸೆಯನ್ನು ಕೊಟ್ಟಿಲ್ಲ. ಬೆಂಗಳೂರಿನ ಮೆಟ್ರೋ ಕಾಮಗಾರಿ,
ರೈಲ್ವೆ ಯೋಜನೆಗಳಿಗೂ ಏನೂ ಕೊಟ್ಟಿಲ್ಲ, ಸಬ್ ಅರ್ಬನ್ ರೈಲು ಯೋಜನೆಗೆ 350 ಕೋಟಿ ರೂಪಾಯಿಯನ್ನು ಭಿಕ್ಷೆ ಎನ್ನುವ ರೀತಿ ಕೊಟ್ಟಿದ್ದಾರೆ. ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಎಷ್ಟು ಹಣ ಹರಿದು ಹೋಗಿದೆ. ಅವರಿಗೆ ಅಷ್ಟು ಹಣ ತೆಗೆದುಕೊಳ್ಳುವ ಸಾಮರ್ಥ್ಯ ಇದ್ದರೆ, ರಾಜ್ಯದಿಂದ ಗೆದ್ದಿರುವ 19 ಮಂದಿ ಎನ್‌ಡಿಎ ಸಂಸದರು ನಾಲಾಯಕ್‌ಗಳಾಗಿದ್ದಾರೆ, ಅವರಿಗೆ ಒಂದು ರೂಪಾಯಿ ತರಲು ಆಗಿಲ್ಲ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

Share This Article