ಡಿ ಕೆ ಶಿವಕುಮಾರ್.. ಕರ್ನಾಟಕ ರಾಜ್ಯ ರಾಜಕಾರಣದ ಪ್ರಬಲ ನಾಯಕ. ಸದ್ಯ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜೈಲುವಾಸ ಅನುಭವಿಸಿ, ಜಾಮೀನು ಮೇಲೆ ಬಿಡುಗಡೆಗೊಂಡಿರುವ ಡಿ ಕೆ ಶಿವಕುಮಾರ್ ಉಪ ಚುನಾವಣಾ ಅಖಾಡಕ್ಕೆ ತಮ್ಮ ಅಭ್ಯರ್ಥಿಗಳ ಪರ ಬ್ಯಾಟಿಂಗ್ ನಡೆಸಲು ಇಳಿದಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ತನ್ನ ಬಲ ತೋರ್ಪಡಿಸುವಲ್ಲಿ ಡಿಕೆಶಿ ಗೆದ್ದಿದ್ದಾರೆ.
ಈ ನಡುವೆ ಅವರು ಮೊದಲ ಬಾರಿಗೆ ಸಚಿವರಾಗಿದ್ದು ಯಾರಿಂದ ಎಂಬುದು ಹೊರಬಂದಿದೆ. ರಾಜಗುರು ದ್ವಾರಕನಾಥ್ ಅವರು ಆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಡಿಕೆಶಿಯನ್ನು ದ್ವಾರಕನಾಥ್ ಅವರೇ ಮೊದಲ ಸಲ ಮಂತ್ರಿ ಮಾಡಿದ್ದಂತೆ! ಡಿ ಕೆ ಶಿವಕುಮಾರ್ ಅವರನ್ನು ಬಂಗಾರಪ್ಪ ಸಚಿವ ಸಂಪುಟದಲ್ಲಿ ಮಂತ್ರಿ ಮಾಡಿದ್ದೆ ಎಂದು ರಾಜಗುರು ಹೇಳಿಕೊಂಡಿದ್ದಾರೆ.
ಚನ್ನರಾಯಪಟ್ಟಣದ ಅಣತಿ ಗ್ರಾಮದಲ್ಲಿ ಮಾತನಾಡುತ್ತಾ ಈ ವಿಷಯವನ್ನು ಅವರು ನೆನಪಿಸಿಕೊಂಡಿದ್ದಾರೆ. ಶಿವಕುಮಾರ್ ಜೀವನದಲ್ಲಿ ಮೊದಲು ಬಂದವನು ನಾನು. ಬಂಗಾರಪ್ಪ ಮಂತ್ರಿ ಮಂಡಲದಲ್ಲಿ ಅವರನ್ನು ಸಚಿವರಾಗಿ ಮಾಡಿದ್ದೆ. ಅವರ ಜೀವನದಲ್ಲಿ ನನ್ನ ಪಾತ್ರ ದೊಡ್ಡದಿದೆ. ಅವರು ನನ್ನಲ್ಲಿಗೆ ಬಂದಿಲ್ಲ. ನಮ್ಮ ಮನೆ ಬಾಗಿಲು ಅವರಿಗೆ ಎಂದೂ ತೆರೆದಿರುತ್ತದೆ ಎಂದಿದ್ದಾರೆ.
ಡಿಕೆಶಿ ಗಂಧದ ಜೊತೆ ಗುದ್ದಾಡಲಿ. ಉತ್ತಮರೊಂದಿಗೆ ಹೋರಾಡಲಿ. ರಾಮ ವನವಾಸ ಮುಗಿದ ಮೇಲೆ ಅಯೋಧ್ಯೆ ಬಂದು ಕೂತಂತೆ ಅವರು ಹೊರಬಂದಿದ್ದಾರೆ. ಇನ್ಮುಂದೆ ಮಾಜಿ ಸಚಿವರಾದ ಡಿಕೆಶಿ ಸಜ್ಜನರ ಸಹವಾಸ ಮಾಡಲಿ ಎಂದು ತಿಳಿ ಹೇಳಿದ್ದಾರೆ.
ಅದಲ್ಲದೆ ಅನರ್ಹ ಶಾಸಕರ ಕುರಿತು ಕೂಡ ರಾಜಗುರುಗಳು ಭವಿಷ್ಯ ನುಡಿದಿದ್ದಾರೆ. ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಆಘಾತ ಕಾದಿದೆ. ಅನರ್ಹ ಶಾಸಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ಪಕ್ಷ ತಾಯಿ ಸಮಾನ. ತಂದೆ-ತಾಯಿ ಬೈದರೆಂದು ಮನೆ ಬಿಟ್ಟು ಹೋಗಲು ಆಗುತ್ತದೆಯೇ? ಕೊನೇಪಕ್ಷ ಅಷ್ಟೂ ಸರಿ ಹೊಂದದಿದ್ದರೆ ಗೆದ್ದ ಪಕ್ಷದಿಂದ ಐದು ವರ್ಷವಾದರೂ ಸೇವೆ ಸಲ್ಲಿಸಿ ಹೊರನಡೆಯಬೇಕು. ಮಧ್ಯದಲ್ಲಿ ಪಕ್ಷ ಬಿಟ್ಟರೆ ಸಾರ್ವಜನಿಕರ ಹಣ, ಸಮಯ ವ್ಯರ್ಥವಾಗುತ್ತದೆ ಎಂದರು
ರಾಜ್ಯ ಬಿಜೆಪಿ ಸರಕಾರಕ್ಕೆ ಮಾರ್ಚಿನವರೆಗೆ ಆಘಾತಗಳಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಹುಷಾರಾಗಿ ಸರಕಾರ ನಡೆಸಬೇಕು ಕಿವಿಮಾತನ್ನೂ ಆಡಿದ್ದಾರೆ.