ನಾನೂ‌ ಮಂಡ್ಯಕ್ಕೆ ಹೋಗ್ತೀನಿ ಅಂದ ಸಿದ್ದರಾಮಯ್ಯ

admin
1 Min Read

ಬಾಗಲಕೋಟೆ: ಸುಮಲತಾ ಅಂಬರೀಶ್‌ ಮಂಡ್ಯಕ್ಕೆ ಬರುವಂತೆ ಆಹ್ವಾನ ನೀಡಿದ್ದು, ಮಂಡ್ಯಕ್ಕೆ ಹೋಗುತ್ತೇನೆ. ಯಾವಾಗ ಹೋಗುತ್ತೇನೆ ಅಂತ ಇನ್ನೂ ನಿರ್ಧಾರ ಆಗಿಲ್ಲ. ಯಾರ ಹೋರಾಟಕ್ಕೂ ನನ್ನ ಬೆಂಬಲ ಇಲ್ಲ. ನ್ಯಾಯಕ್ಕೆ ನನ್ನ ಬೆಂಬಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಮಾತನಾಡಿದ ಅವರು, ಮಂಡ್ಯಕ್ಕೆ ಬರುವಂತೆ ಸುಮಲತಾ ಅಂಬರೀಶ್ ನೀಡಿದ್ದ ಆಹ್ವಾನಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಯಾರ ತಪ್ಪಿದೆ ಅಂತ ನನಗೆ ಗೊತ್ತಿಲ್ಲ. ಸುಮಲತಾ ಅವರಿದ್ದು ತಪ್ಪಿದೆಯೋ, ಕುಮಾರಸ್ವಾಮಿಯದ್ದು ತಪ್ಪಿದೆಯೋ ಗೊತ್ತಿಲ್ಲ. ನ್ಯಾಯದ ಪರ ನನ್ನ ಬೆಂಬಲ. ಅಕ್ರಮ ಗಣಿಗಾರಿಕೆ ನಡೀತಿದ್ರೆ ಅದನ್ನು ಸ್ಥಗಿತಗೊಳಿಸುವುದು ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು.
ಲೋಕಸಭೆ ಸದಸ್ಯೆ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಅಕ್ರಮ ಮೈನಿಂಗ್, ಕ್ರಷರ್ ಬಗ್ಗೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕಿತ್ತು. ರಾಜ್ಯದಲ್ಲಿ ಎಲ್ಲೆಡೆ ಅಕ್ರಮ ನಡೆಯುತ್ತಿದೆ. ಈ ಅಕ್ರಮ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಕ್ಷೇತ್ರ ಸೇರಿದಂತೆ ಎಲ್ಲೆಡೆ ನಡೆಯುತ್ತಿದೆ. ಸರ್ಕಾರ ಏನು ಹೇಳಿದ್ರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.


ಯಡಿಯೂರಪ್ಪನವರಿಗೆ ಕುರ್ಚಿ ಉಳಿಸಿಕೊಳ್ಳುವುದು, ಅವರ ಮಗನಿಗೆ ದುಡ್ಡು ಹೊಡೆಯೋದೇ ಕೆಲಸವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಆರೋಪಿಸಿದರು.
ಯಡಿಯೂರಪ್ಪನವರ ಕುರ್ಚಿ ಅಲ್ಲಾಡಲಿಕ್ಕೆ ಹತ್ತಿ ಬಹಳ ದಿನವಾಯ್ತು. ಪಾಪ, ಸ್ಥಾನ ಉಳಿಸಿಕೊಳ್ಳೋಕೆ ಏನೇನು ಬೇಕೋ, ಎಲ್ಲ ಪ್ರಯತ್ನವನ್ನು ಯಡಿಯೂರಪ್ಪ ಮಾಡ್ತಿದ್ದಾರೆ. ಅವರ ಮಗ ಇನ್ನೊಂದು ಕಡೆಗೆ ಲೂಟಿ ಹೊಡೀತಾ ಕೂತಿದ್ದಾನೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.


ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಈ ಬಗ್ಗೆ ಹೇಳಿದ್ದೇನೆ. ಈಗಲೂ ಅಷ್ಟೇ ಬಾದಾಮಿಯಿಂದಲೇ ಸ್ಫರ್ಧೆ ಮಾಡುತ್ತೇನೆ ಎಂದರು.

Share This Article
Leave a Comment