ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಆಯೋಜಿಸಿರುವ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠವು ಷರತ್ತುಬದ್ಧ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದ ಪ್ರಕಾರ, ನವೆಂಬರ್ 16ರಂದು ಮಧ್ಯಾಹ್ನ 3:30ರಿಂದ ಸಂಜೆ 5:45ರವರೆಗೆ ಮಾತ್ರ ಪಥಸಂಚಲನ ನಡೆಸಲು ಅವಕಾಶ ನೀಡಲಾಗಿದೆ.
ಪಥಸಂಚಲನದಲ್ಲಿ ಕೇವಲ 300 ಗಣವೇಷಧಾರಿಗಳು (ಸಂಘದ ಕಾರ್ಯಕರ್ತರು) ಮಾತ್ರ ಭಾಗವಹಿಸಬೇಕೆಂದು ನ್ಯಾಯಾಲಯ ಸೂಚಿಸಿದ್ದು, ಬ್ಯಾಂಡ್ ವಾದ್ಯಗಾರರ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಲಾಗಿದೆ.
ನ್ಯಾಯಾಲಯವು ಪಥಸಂಚಲನದ ವೇಳೆ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಸ್ಪಷ್ಟ ಷರತ್ತುಗಳನ್ನು ವಿಧಿಸಿದೆ. ಈ ಮೂಲಕ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಹೈಕೋರ್ಟ್ನ ಅನುಮತಿ ಸಿಕ್ಕಿದ್ದರೂ, ಅದು ಕಠಿಣ ನಿಯಮ ಮತ್ತು ನಿಯಂತ್ರಣಗಳಡಿ ನಡೆಯಬೇಕೆಂದು ನ್ಯಾಯಾಲಯ ತಿಳಿಸಿದೆ.
ಚಿತ್ತಾಪುರದಲ್ಲಿ RSS ಪಥಸಂಚಲನ ವಿಚಾರ ಸಂಬಂಧ ಎರಡು ಬಾರಿ ಶಾಂತಿ ಸಭೆ ನಡೆದಿತ್ತು. ಮೊದಲ ಬಾರಿಗೆ ಅ.28ರಂದು ಜಿಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿತ್ತು. ಈ ಸಭೆ ವಿಫಲವಾಗಿದ್ದ ಹಿನ್ನಲೆ ಕೋರ್ಟ್ ಸೂಚನೆಯಂತೆ 2ನೇ ಬಾರಿ ಶಾಂತಿ ಸಭೆಯನ್ನ ಬೆಂಗಳೂರಿನ ಅಡ್ವೊಕೇಟ್ ಜನರಲ್ (ಎಜಿ) ಕಚೇರಿಯಲ್ಲಿ ನವೆಂಬರ್ 5ರಂದು ನಡೆಸಲಾಗಿತ್ತು.






