ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 14) ನಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಬೆಂಗಳೂರು 6 ರನ್ಗಳ ರೋಚಕ ಜಯ ದಾಖಲಿಸಿತ್ತು. ಅಸಲಿಗೆ ಇದು ಸನ್ ರೈಸರ್ಸ್ ಹೈದರಾಬಾದ್ ಗೆಲ್ಲಬೇಕಿದ್ದ ಪಂದ್ಯ. ಆದರೆ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳ ಬೆಂಬಲ ಸಿಗದೆ ಎಸ್ಆರ್ಎಚ್ ಟೂರ್ನಿಯಲ್ಲಿ ಸತತ 2ನೇ ಸೋಲು ಕಂಡಿತ್ತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ 33, ಗ್ಲೆನ್ ಮ್ಯಾಕ್ಸ್ವೆಲ್ 59 ರನ್ನೊಂದಿಗೆ 20 ಓವರ್ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಹೈದರಾಬಾದ್, ಡೇವಿಡ್ ವಾರ್ನರ್ 54, ಮನೀಶ್ ಪಾಂಡೆ 38 ರನ್ನೊಂದಿಗೆ 143 ರನ್ ಗಳಿಸಿತು.
ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ರೋಚಕ ಪಂದ್ಯ ನಡೆಯುವಾಗ ಸನ್ ರೈಸರ್ಸ್ ಹೈದರಾಬಾದ್ ಸಹ ಮಾಲೀಕೆ ಕಾವ್ಯ ಮಾರನ್ ಚಡಪಡಿಸುತ್ತಿರುವುದು ಕಾಣಿಸಿತ್ತು. ಸ್ಟೇಡಿಯಂನ ಬದಿಯಲ್ಲಿ ಕುಳಿತಿದ್ದ ಕಾವ್ಯ, ಮನೀಶ್ ಪಾಂಡೆ ಔಟಾದಾಗಂತೂ ತುಂಬಾ ಬೇಸರ ಪಟ್ಟಿದ್ದರು. ಕಾವ್ಯಾ ಅವರ ಬೇಸರದ ಚಿತ್ರಗಳಿಗೆ ನೆಟ್ಟಿಗರು ಕೂಡ ಮರುಗಿದ್ದಾರೆ.
13.2ನೇ ಓವರ್ನಲ್ಲಿ ಡೇವಿಡ್ ವಿಕೆಟ್ ಪತನವಾದಾಗ ಕೂಡ ಕಾವ್ಯ ಮುಖದಲ್ಲಿ ಬೇಸರ ಕಾಣಿಸಿಕೊಂಡಿತ್ತು. ಅದಾಗಿ ಜಾನಿ ಬೇರ್ಸ್ಟೋವ್, ಮನೀಶ್ ಪಾಂಡೆ, ಅಬ್ದುಲ್ ಸಮದ್, ವಿಜಯ್ ಶಂಕರ್, ಜೇಸನ್ ಹೋಲ್ಡರ್ ಎಲ್ಲರೂ ಬೇಗ ಬೇಗನೆ ವಿಕೆಟ್ ಒಪ್ಪಿಸಿದರು.
ಎಸ್ಆರ್ಎಚ್ ಸೋಲಿನಂಚಿಗೆ ನಡೆಯುತ್ತಿದ್ದಾಗ ವೇಳೆ ಕಾವ್ಯ ಚಡಪಡಿಸುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅನೇಕ ಕ್ರಿಕೆಟ್ ಅಭಿಮಾನಿಗಳು ಈಕೆ ಇಷ್ಟು ಬೇಸರಗೊಳ್ಳುವ ರೀತಿ ಆಡಬೇಡಿ, ಇದನ್ನು ನಮ್ಮಿಂದ ನೋಡಲಾಗುತ್ತಿಲ್ಲ,’ ಎಂದು ಟ್ವೀಟ್ಗಳನ್ನು ಮಾಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಮಾಲೀಕ ಕಲಾನಿಧಿ ಮಾರನ್ ಅವರ ಪತ್ರಿ ಈ ಕಾವ್ಯ ಮಾರನ್. ಇನ್ನು ಈ ಕಲಾನಿಧಿ ಮಾರನ್ ಯಾರೆಂದರೆ, ಸನ್ ಟಿವಿ ನೆಟ್ವರ್ಕ್ಸ್ನ ಮಾಲೀಕ. ಭಾರತದಲ್ಲಿ ದೊಡ್ಡ ದೂರದರ್ಶನ ಜಾಲ ಹೊಂದಿರುವ ಸನ್ ಟಿವಿ ನೆಟ್ವರ್ಕ್ಸ್ 32 ಟಿವಿ ಚಾನೆಲ್ಗಳು ಮತ್ತು 45 ಎಫ್ಎಂ ರೇಡಿಯೋ ಸ್ಟೇಶನ್ಗಳನ್ನು ಹೊಂದಿದೆ.