ಪ್ರಿಯಕರನ ಸಾಲ ತೀರಿಸಲು ಮನೆಗೆ ದ್ರೋಹ: ಹೆಣ್ಣೂರು ಪೊಲೀಸರಿಂದ ಖತರ್ನಾಕ್ ಆಂಟಿ ಅರೆಸ್ಟ್!
ಬೆಂಗಳೂರು: ಪ್ರಿಯಕರನ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಹೆಣ್ಣೂರು ಪೊಲೀಸರು ಭೇದಿಸಿದ್ದಾರೆ. ಪ್ರಮೀಳಾ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಆಕೆಯ ಪ್ರಿಯಕರ ಸುಧಾಕರ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರಮೀಳಾ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಸುಮಾರು ಮೂರು ತಿಂಗಳಿಂದ ಮನೆ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸುಧಾಕರ್ ಎಂಬಾತನೊಂದಿಗೆ ಪರಿಚಯವಾಗಿದ್ದು, ನಂತರ ಪ್ರೀತಿಗೆ ತಿರುಗಿತ್ತು. ಸುಧಾಕರ್ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಪ್ರಮೀಳಾಗೂ ಮದುವೆಯಾಗಿದ್ದರೂ ಗಂಡ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ಸಂಕ್ರಾಂತಿ ಹಬ್ಬದ ವೇಳೆ ಸುಧಾಕರ್ ಪ್ರಮೀಳಾ ಬಳಿ ₹20,000 ಹಣ ಕೇಳಿದ್ದಾನೆ. ಪ್ರಿಯಕರನ ಸಾಲ ತೀರಿಸಲು ಪ್ರಮೀಳಾ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಿಂದ ಚಿನ್ನಾಭರಣ ಕಳವು ಮಾಡಿದ್ದಾಳೆ. ಕದ್ದ ಚಿನ್ನವನ್ನು ಬೊಮ್ಮನಹಳ್ಳಿಯ ಚಿನ್ನದ ಅಂಗಡಿಗಳಲ್ಲಿ ಮಾರಾಟ ಮಾಡಿ ಹಣವನ್ನು ಸುಧಾಕರ್ಗೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ನಡೆದ ಸುಮಾರು ಒಂದು ತಿಂಗಳ ಬಳಿಕ ಮಾಲೀಕರು ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿದೆ. ತಕ್ಷಣ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರಂಭದಲ್ಲಿ ತನಗೆ ಏನೂ ಗೊತ್ತಿಲ್ಲವೆಂದು ಪ್ರಮೀಳಾ ನಾಟಕ ಮಾಡಿದ್ದರೂ, ಪೊಲೀಸರು ಕಠಿಣ ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾಳೆ.
ಪೊಲೀಸರು ಆರೋಪಿತೆಯಿಂದ ಒಟ್ಟು 35 ಗ್ರಾಂ ತೂಕದ, ಸುಮಾರು ₹3.4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧಿಸಿ ಪರಾರಿಯಾಗಿರುವ ಸುಧಾಕರ್ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.






