No menu items!
12.4 C
Munich
Wednesday, April 29, 2026

ಭಾರತದ ಸ್ಥಿತಿ ನೆನೆದು ಮ್ಯಾಥ್ಯೂ ಹೇಡನ್ ಕಣ್ಣೀರು

Must read

ದೇಶದಾದ್ಯಂತ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತನ್ನ ಭೀಕರತೆಯನ್ನು ಹೆಚ್ಚಿಸುತ್ತಿದ್ದು ಈಗಾಗಲೇ ಸಾಕಷ್ಟು ಜನರನ್ನು ಬಲಿ ಪಡೆದುಕೊಂಡಿದೆ. ಸಾಮಾನ್ಯ ಜನರ ಜೊತೆ ಹಲವಾರು ಕ್ರೀಡಾಪಟುಗಳು ಸಹ ಕೊರೊನಾಗೆ ಬಲಿಯಾಗಿದ್ದು ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಸಹ ಕೊರೊನಾ ಭಯದಿಂದ ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ.

 

ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಈಗಾಗಲೇ ಹಲವಾರು ವಿದೇಶಿ ಕ್ರಿಕೆಟಿಗರು ಭಾವುಕರಾಗಿ ಹೇಳಿಕೆಗಳನ್ನು ನೀಡಿದ್ದು ಆದಷ್ಟು ಬೇಗ ಭಾರತ ಮೊದಲಿನ ಸ್ಥಿತಿಗೆ ಮರಳಲಿ ಎಂದು ಆಶಿಸಿದ್ದಾರೆ. ಇದೀಗ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಕೂಡಾ ಭಾರತದಲ್ಲಿನ ಕೊರೊನಾವೈರಸ್ ಅಟ್ಟಹಾಸದ ಬಗ್ಗೆ ಭಾವುಕ ಬರಹವನ್ನು ಬರೆದಿದ್ದಾರೆ.

 

 

 

ನಾನು ಭಾರತ ದೇಶಕ್ಕೆ ಒಂದು ದಶಕದಿಂದ ಭೇಟಿ ನೀಡುತ್ತಿದ್ದೇನೆ ಹಾಗೂ ಆಗಾಗ ಪ್ರವಾಸವನ್ನು ಕೈಗೊಳ್ಳುತ್ತಾ ಇರುತ್ತೇನೆ, ಅದರಲ್ಲಿಯೂ ತಮಿಳುನಾಡನ್ನು ನನ್ನ ಆಧ್ಯಾತ್ಮಿಕ ನೆಲೆ ಎಂದೇ ಪರಿಗಣಿಸಿದ್ದೇನೆ. ನಾನು ಭಾರತಕ್ಕೆ ಹೋದಾಗಲೆಲ್ಲ ಜನ ನನ್ನನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಸ್ವಾಗತಿಸುತ್ತಾರೆ, ಹಲವಾರು ವರ್ಷಗಳಿಂದ ಇಂತಹ ದೇಶವನ್ನು ಹತ್ತಿರದಿಂದ ನೋಡಿದ್ದು ನನ್ನ ಪುಣ್ಯ, ಅಂತಹ ವಿಶಾಲ ದೇಶ ಪ್ರಸ್ತುತ ಕೊರೊನಾ ವೈರಸ್‌ನಿಂದ ನೋವಿಗೊಳಗಾಗಿದ್ದು ನನ್ನ ಮನಸ್ಸು ಮಿಡಿಯುತ್ತಿದೆ ಎಂದು ಮ್ಯಾಥ್ಯೂ ಹೇಡನ್ ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ದೇಶವನ್ನು ನಿರ್ವಹಿಸುತ್ತಿರುವ ನಾಯಕರು ಮತ್ತು ಅಧಿಕಾರಿಗಳ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಭಾರತದಲ್ಲಿ ಸಾರ್ವಜನಿಕರು ಅಪಾರವಾದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸಹ ಕೆಲವೊಂದಿಷ್ಟು ಕೆಟ್ಟ ಮಾಧ್ಯಮಗಳು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮ್ಯಾಥ್ಯೂ ಹೇಡನ್ ಬರಹದ ಮೂಲಕ ತಿಳಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವ ಭಾರತವನ್ನು ಕಳಪೆ ಮಟ್ಟದಲ್ಲಿ ಬಿಂಬಿಸುತ್ತಿರುವ ಮಾಧ್ಯಮದವರ ವಿರುದ್ಧ ಈ ಬರಹದಲ್ಲಿ ಮ್ಯಾಥ್ಯೂ ಹೇಡನ್ ಅವರು ಕಿಡಿಕಾರಿದ್ದು ಭಾರತಕ್ಕೆ ಗೌರವ ಸಿಗಬೇಕೆಂದು ತಿಳಿಸಿದ್ದಾರೆ.

 

 

ಮ್ಯಾಥ್ಯೂ ಹೇಡನ್ ಭಾರತದ ಕುರಿತು ಬರೆದಿರುವ ಬರಹವನ್ನು ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಭಾರತದ ಮೇಲಿನ ನಿಮ್ಮ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article