ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಜಯ ದಾಖಲಿಸಿ ಸರಣಿಯಲ್ಲಿ 1-1 ಅಂತರದ ಸಮಬಲ ತಂದುಕೊಂಡಿತು. ಈ ಗೆಲುವಿಗೆ ತಂಡದಲ್ಲಿದ್ದ ಇಬ್ಬರು ವಿಕೆಟ್ಕೀಪರ್ ಬ್ಯಾಟ್ಸ್ಮನ್ಗಳಾದ ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಮಹತ್ವದ ಪಾತ್ರ ನಿಭಾಯಿಸಿದ್ದರು.
ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜಾರ್ಖಂಡ್ ಮೂಲದ ಆಟಗಾರ ಇಶಾನ್ ಕಿಶನ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು 32 ಎಸೆತಗಳಲ್ಲಿ 56 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ರಿಷಭ್ ಪಂತ್ ಕೂಡ ಸ್ಫೋಟ ಬ್ಯಾಟಿಂಗ್ ನಡೆಸಿ 13 ಎಸೆತಗಳಲ್ಲಿ 26 ರನ್ ಚೆಚ್ಚಿದರು.
“ಇಶಾನ್ ಕಿಶನ್ ಕಳೆದ ಐಪಿಎಲ್ನಲ್ಲಿ 30 ಸಿಕ್ಸರ್ ಬಾರಿಸಿದ್ದರು. ಈ ಇಬ್ಬರೂ ಬ್ಯಾಟ್ಸ್ಮನ್ಗಳಲ್ಲಿ ಸಿಕ್ಸರ್ ಬಾರಿಸುವ ಸಾಮರ್ಥ್ಯವಿದೆ. ಭಾರತ ತಂಡಕ್ಕೆ ಇದರ ಅಗತ್ಯವಿದೆ. ಟಿ20 ಕ್ರಿಕೆಟ್ ವಿಶ್ವಕಪ್ ಅನುಗುಣವಾಗಿ ಈ ಇಬ್ಬರೂ ಆಟಗಾರರು ಭಾರತ ತಂಡದಲ್ಲಿ ಇರುವುದು ಅತ್ಯುತ್ತಮ ಬೆಳವಣಿಗೆ. ಇಬ್ಬರಿಗೂ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ. ಆತ್ಮವಿಶ್ವಾಸದಲ್ಲಿ ಮುನ್ನಡೆಯಲಿ,” ಎಂದು ಕರೀಮ್ ಹಾರೈಸಿದ್ದಾರೆ.
ಐಪಿಎಲ್ 2020 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 500ಕ್ಕೂ ಹೆಚ್ಚು ರನ್ಗಳಿಸಿ ಗರಿಷ್ಠ ರನ್ ಸ್ಕೋರರ್ ಎನಿಸಿದ್ದ ಇಶಾನ್ ಕಿಶನ್, ಅತ್ಯಧಿಕ ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ ಕೂಡ ಎನಿಸಿಕೊಂಡಿದ್ದರು. ಈಗ ಭಾರತ ತಂಡಕ್ಕೆ ಪದಾರ್ಪಣೆಯ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮುಂಬರು ಟಿ20 ಕ್ರಿಕೆಟ್ ವಿಶ್ವಕಪ್ಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಭಾರತ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ.
“ಭಾರತ ತಂಡಕ್ಕೆ ಇಬ್ಬರು ಧೋನಿ ಸಿಗುತ್ತಾರೆ ಎಂದರೆ ಅದಕ್ಕಿಂತಲೂ ದೊಡ್ಡ ಸಂಗತಿ ಮತ್ತೊಂದು ಇರಲಾರದು. ಈ ಇಬ್ಬರಲ್ಲಿನ ಭಯಮುಕ್ತ ಆಟ ಕಂಡರೆ ಅವರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಅರಿವಿದೆ ಎಂಬುದು ಸ್ಪಷ್ಟವಾಗುತ್ತದೆ. ಆಕ್ರಮಣಕಾರಿ ಆಟದ ಜೊತೆಗೆ ಯೋಚಿಸಿ ದೊಡ್ಡ ಹೊಡೆತಗಳನ್ನು ಆಡುತ್ತಿದ್ದಾರೆ,” ಎಂದು ಇಂಡಿಯಾ ನ್ಯೂಸ್ ಕಾರ್ಯಕ್ರಮದಲ್ಲಿ ಕರೀಮ್ ಹೇಳಿದ್ದಾರೆ.
ಕಿಶನ್ ಮತ್ತು ಪಂತ್ ಇಬ್ಬರೂ ಕೂಡ 2016ರ ಐಸಿಸಿ ಕಿರಿಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಜೊತೆಯಾಗಿ ಆಡಿದ್ದರು. ಕಿಶನ್ ಸಾರಥ್ಯದಲ್ಲಿ ಭಾರತ ತಂಡ ಫೈನಲ್ ತಲುಪಿತ್ತಾದರೂ ವೆಸ್ಟ್ ಇಂಡೀಸ್ ಎದುರು ಸೋತು ರನ್ನರ್ಸ್ಅಪ್ ಸ್ಥಾನ ಪಡೆದಿತ್ತು. ಇದೇ ಟೂರ್ನಿಯಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಭಾರತ ತಂಡದಲ್ಲಿ ಇದ್ದರು. ಈಗ ಈ ಮೂರೂ ಆಟಗಾರರು ಭಾರತ ಹಿರಿಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.