ಈಶಾನ್ಯ ಹಾಗೂ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಸೆ. 24ರಂದು ಒತ್ತಡ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಮುಂಗಾರು ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಾಖಂಡ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಭಾನುವಾರದವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮುಂಗಾರು ತನ್ನ ಸಾಮಾನ್ಯ ಸ್ಥಾನಕ್ಕೆ ಮರಳಲಿದ್ದು, ದಕ್ಷಿಣಕ್ಕೆ ಚಲಿಸಲಿದೆ ಹಾಗೂ ಮುಂದಿನ ಐದು ದಿನಗಳಲ್ಲಿ ಇದರ ಪ್ರಭಾವ ಮುಂದುವರೆಯುತ್ತದೆ ಎಂದು ಮಾಹಿತಿ ನೀಡಿದೆ.
ಉತ್ತರ ಛತ್ತೀಸ್ಗಡ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ಚಂಡಮಾರುತದ ಪರಿಚಲನೆಯಿದ್ದು, ಮುಂದಿನ ಮೂರು ದಿನಗಳಲ್ಲಿ ಉತ್ತರ ಮಧ್ಯ ಪ್ರದೇಶದ ಪಶ್ಚಿಮ ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ರಾಜಸ್ಥಾನ ಮತ್ತು ನೆರೆಹೊರೆಯಲ್ಲಿ ಇನ್ನೊಂದು ಚಂಡಮಾರುತದ ಪರಿಚಲನೆ ಇರಲಿದೆ. ಈ ಹವಾಮಾನ ವೈಪರೀತ್ಯಗಳಿಂದಾಗಿ ಉತ್ತರಾಖಂಡದಲ್ಲಿ ಭಾನುವಾರದವರೆಗೆ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಶುಕ್ರವಾರದವರೆಗೆ ಮಳೆಯಾಗಲಿದೆ. ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಸೆಪ್ಟೆಂಬರ್ 26ರವರೆಗೂ ಪೂರ್ವ ರಾಜಸ್ಥಾನ ಹಾಗೂ ಗುಜರಾತ್ನಲ್ಲಿ ವ್ಯಾಪಕ ಮಳೆಯಾಗಲಿದೆ. ಮಧ್ಯ ಪ್ರದೇಶ, ವಿದರ್ಭಾ, ಛತ್ತೀಸ್ಗಡದಲ್ಲಿ ಮುಂದಿನ ಗುರುವಾರದವರೆಗೂ ಮಳೆಯಾಗುವುದಾಗಿ ತಿಳಿಸಿದೆ.
ಮ್ಯಾನ್ಮಾರ್ ಕರಾವಳಿಯಲ್ಲಿ ಹಾಗೂ ಮಾರ್ಟಬನ್ ಕೊಲ್ಲಿಗೆ ತಾಗಿಕೊಂಡಂತೆ ಚಂಡಮಾರುತದ ಪರಿಚಲನೆಯಿದೆ. ಇದು ವಾಯವ್ಯ ದಿಕ್ಕಿಗೆ ಚಲಿಸಿ ಈಶಾನ್ಯ ಹಾಗೂ ಪಕ್ಕದ ಪೂರ್ವ- ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಲಿಸಲಿದೆ. ಅದರ ಪ್ರಭಾವದ ಅಡಿಯಲ್ಲಿ ಶುಕ್ರವಾರ ಈ ಪ್ರದೇಶದಲ್ಲಿ ಒತ್ತಡ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಒಡಿಶಾ ಕರಾವಳಿ ಕಡೆಗೆ, ಪಶ್ಚಿಮ ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಶನಿವಾರ ಒಡಿಶಾ ಹಾಗೂ ನೆರೆಹೊರೆ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.