ನಟಿ. ಮಾಜಿ ಸಂಸದೆ ರಾಜಕಾರಣಿ ರಮ್ಯಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ರಮ್ಯಾ ಅವರೀಗ ತಮ್ಮ ಆ ಹುದ್ದೆಯನ್ನು ತೊರೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ದಿವ್ಯ ಸ್ಪಂದನಾ ಎಂದೇ ಗುರುತಿಸಿಕೊಂಡಿದ್ದಾರೆ. ಅವರ ಆ ದಿವ್ಯ ಸ್ಪಂದನಾ ಟ್ವೀಟರ್ ಖಾತೆ ಡಿಲೀಟ್ ಆಗಿ ಬಿಟ್ಟಿದೆ. ರಮ್ಯಾ ಅದರಲ್ಲಿನ ತಮ್ಮ ಹಳೆಯ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರನ್ನು ಪದೇ ಪದೇ ಟೀಕಿಸುತ್ತಾ ಟೀಕೆಗೆ ಗುರಿಯಾಗುತ್ತಿದ್ದ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ನಾಪತ್ತೆ ಆಗಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.
ರಮ್ಯಾ ಅವರು ಟ್ವೀಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಅವರು ಸೋಶಿಯಲ್ ಮೀಡಿಯಾದ ಮುಖ್ಯಸ್ಥರ ಸ್ಥಾನವನ್ನು ತ್ಯಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಮ್ಯಾ ತಮ್ಮ ಟ್ವೀಟ್ ಮೂಲಕ ಅನೇಕ ಬಾರಿ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದುಂಟು. ಅಷ್ಟೇ ಅಲ್ಲದೆ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯವೂ ಬಿತ್ತರ ವಾಗಿದ್ದುಂಟು. ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವುದರಿಂದ ಟೀಕೆಗೆ ವಿಷಯವೂ ಇಲ್ಲದಾಗಿದೆ.
ಪದೇ ಪದೇ ಕಾಂಗ್ರೆಸ್ಗೆ ಆಗುತ್ತಿರುವ ಮುಜುಗರ ತಪ್ಪಿಸಲು ಕಾಂಗ್ರೆಸ್ ಹೈಕಮಾಂಡೇ ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲು ಹೇಳಿರಬಹುದು.
ಒಟ್ಟಿನಲ್ಲಿ ರಮ್ಯಾ ಟ್ವೀಟರ್ ಮತ್ತು ಇನ್ಸ್ಟಾಗ್ರಾಮ್ ನಿಂದ ದೂರ ಹೋಗಿರುವುದು ಅನೇಕ ಅಂತೆಕಂತೆಗಳಿಗೆ ನಾಂದಿ ಹಾಡಿದ್ದು ರಮ್ಯಾನೇ ಉತ್ತರ ನೀಡಬೇಕು.