ರಿಷಭ್ ಪಂತ್ ಟೀಮ್ ಇಂಡಿಯಾದ ಭವಿಷ್ಯ ನಾಯಕ

admin
3 Min Read

ಕಳೆದ ವರ್ಷ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ, ಅಡಿಲೇಡ್‌ನಲ್ಲಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅನುಭವಿ ವೃದ್ಧಿಮಾನ್ ಸಹಾ ಅವರನ್ನು ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ತೆಗೆದುಕೊಂಡಿದ್ದರು.
ಆದರೆ, ನಂತರದ ಟೆಸ್ಟ್‌ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದ ಪಂತ್‌ ಹಿಂದಿರುಗಿ ನೋಡಿದ್ದೇ ಇಲ್ಲ. ಭಾರತ ತಂಡದಲ್ಲಿ ತಮ್ಮ ಅಳಿವು ಉಳಿವಿಗಾಗಿ ಸಿಕ್ಕಿದ್ದ ಎರಡನೇ ಅವಕಾಶದಲ್ಲಿ ಅಬ್ಬರಿಸಿದ್ದ ಪಂತ್ 5 ಇನಿಂಗ್ಸ್‌ಗಳಲ್ಲಿ 275 ರನ್‌ಗಳನ್ನು ಬಾರಿಸಿ ಸರಣಿಯಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ರನ್‌ ಸ್ಕೋರ್ ಮಾಡಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.


ಬಳಿಕ ಇಂಗ್ಲೆಂಡ್‌ ವಿರುದ್ಧ ತವರಿನಂಗಣದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಅದೇ ಲಯ ಕಾಯ್ದುಕೊಂಡ ಎಡಗೈ ಬ್ಯಾಟ್ಸ್‌ಮನ್‌ 6 ಇನಿಂಗ್ಸ್‌ಗಳಲ್ಲಿ 270 ರನ್ ಬಾರಿಸಿ ತಂಡದ ಪರ ಎರಡನೇ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದರು. ಈ ಭರ್ಜರಿ ಪ್ರದರ್ಶನಗಳ ಮೂಲಕ ಮತ್ತೊಮ್ಮೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ.
ಪಂತ್ ಅವರ ಈ ಅಮೋಘ ಅಟಕ್ಕೆ ಫಲವಾಗಿ ಏಪ್ರಿಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವವೂ ಲಭ್ಯವಾಯಿತು. ದಿಲ್ಲಿ ಪಡೆಯ ನಾಯಕ ಶ್ರೇಯಸ್‌ ಅಯ್ಯರ್‌ ಗಾಯಗೊಂಡಿದ್ದ ಕಾರಣ ಪಂತ್‌ಗೆ ನಾಯಕತ್ವದ ಜವಾಬ್ದಾರಿ ಸಿಕ್ಕಿತ್ತು. ಇದನ್ನು ಅತ್ಯುತ್ತಮವಾಗಿ ಬಳಸಿಕೊಂಡ ಪಂತ್‌, ಕೊರೊನಾ ವೈರಸ್‌ ಕಾರಣ ಟೂರ್ನಿ ಅರ್ಧಕ್ಕೆ ನಿಲ್ಲುವ ಮೊದಲು 8 ಪಂದ್ಯಗಳಲ್ಲಿ 6 ಜಯ ತಂದುಕೊಡುವ ಮೂಲಕ ತಂಡವನ್ನು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿಸಿದ್ದರು. ಈ ಮೂಲಕ ತಮ್ಮಲ್ಲಿನ ನಾಯಕತ್ವದ ಗುಣಗಳಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಆದ್ದರಿಂದಲೇ ಕೆಲ ಮಾಜಿ ಕ್ರಿಕೆಟಿಗರು ಪಂತ್‌ ಭಾರತ ತಂಡದ ಭವಿಷ್ಯದ ನಾಯಕ ಎಂದೇ ಕರೆದಿದ್ದಾರೆ.


ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್‌ ಹಾಗೂ ಎರಡು ಬಾರಿಯ ವಿಶ್ವಕಪ್ ವಿನ್ನರ್‌ ಯುವರಾಜ್‌ ಸಿಂಗ್‌, 23 ವರ್ಷದ ಯುವ ವಿಕೆಟ್‌ಕೀಪರ್ ಕಮ್‌ಬ್ಯಾಕ್‌ ಮಾಡಿರುವ ರೀತಿಯನ್ನು ಗುಣಗಾನ ಮಾಡಿದ್ದಾರೆ ಅಷ್ಟೇ ಅಲ್ಲದೆ ಭಾರತ ತಂಡದ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಅವರಲ್ಲಿದೆ ಎಂದಿದ್ದಾರೆ.
“ಕ್ರೀಡೆಯಲ್ಲಿ ಏಳು ಬೀಳು ಸಾಮಾನ್ಯ. ಯಶಸ್ಸಿನ ಅಲೆಯಲ್ಲಿ ಸಾಗಿದ ಬಳಿಕ ಕೆಲವೊಮ್ಮೆ ವೈಫಲ್ಯದಿಂ ಪಾತಾಳಕ್ಕೂ ಇಳಿಯುವಂತೆ ಮಾಡುತ್ತದೆ. ಆದರೆ ಪಂತ್‌ ಕಮ್‌ಬ್ಯಾಕ್‌ ಸಲುವಾಗಿ ಬಹಳಾ ಕಷ್ಟ ಪಟ್ಟಿದ್ದಾರೆ. ಹೀಗಾಗಿ ಆತ ಭಾರತ ತಂಡ ‘ಎಕ್ಸ್‌-ಫ್ಯಾಕ್ಟರ್‌’ ಆಟಗಾರನಾಗಿ ಗುರುತಿಸಿಕೊಂಡಿದ್ದಾನೆ. ಆಸ್ಟ್ರೇಲಿಯಾ ಎದುರು ಪಂತ್ ಮತ್ತು ಶುಭಮನ್ ಬ್ಯಾಟ್‌ ಮಾಡಿದ ರೀತಿ ಕಂಡರೆ ಈ ಯುವ ಆಟಗಾರರು ಎಷ್ಟು ಅದ್ಭುತವಾಗಿದ್ದಾರೆ ಎಂಬುದು ತಿಳಿಯುತ್ತದೆ. ಇವರಲ್ಲಿ ಅಪಾರ ಪ್ರತಿಭೆ ಇದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನಾಗಿಯೂ ಪಂತ್‌ ಗಮನ ಸೆಳೆದಿದ್ದಾರೆ. ನನ್ನ ಪ್ರಕಾರ ಖಂಡಿತವಾಗಿಯೂ ಅವರು ಭಾರತ ತಂಡದ ಭವಿಷ್ಯದ ನಾಯಕ,” ಎಂದು ಕ್ವಿಂಟ್‌ ಜೊತೆಗಿನ ಸಂದರ್ಶನದಲ್ಲಿ ಯುವಿ ಹೇಳಿಕೊಂಡಿದ್ದಾರೆ.
ಸದ್ಯ ಭಾರತ ತಂಡ ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ. ಟೆಸ್ಟ್‌ ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಆಗಿರುವ ಈ ಪಂದ್ಯಕ್ಕೆ ಪಂತ್‌ ಭಾರತ ತಂಡದ ವಿಕೆಟ್‌ಕೀಪರ್‌ ಆಗಿ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾಗೆ ಈ ಪಂದ್ಯವನ್ನೂ ಪಂತ್‌ ಗೆದ್ದುಕೊಡುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆ ಆಗಿದೆ.
ಜೂನ್ 18-22ರವರೆಗೆ ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನೇರ ಪ್ರಸಾರ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಲೈವ್‌ ಸ್ಟ್ರೀಮ್ ಆಗಲಿದೆ.

Share This Article
Leave a Comment