ರೀಲ್ಸ್ ತಂದ ಆಪತ್ತು: ಮಧ್ಯರಾತ್ರಿ ಬಿಡುಗಡೆ ಆದ ವಿನಯ್, ರಜತ್
ಬೆಂಗಳೂರು: ನಿಷೇಧಿತ ಮಾರಕಾಸ್ತ್ರವಾದ ಲಾಂಗ್ ಹಿಡಿದು ಓಡಾಡಿದ್ದಕ್ಕಾಗಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರ ಮೇಲೆ ಕೇಸ್ ದಾಖಲಾಗಿದೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇನ್ನೂ ನಿನ್ನೆ ಮಧ್ಯಾಹ್ನ ಅರೆಸ್ಟ್ ಆಗಿದ್ದ ಇಬ್ಬರೂ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದಾರೆ.
ಇಬ್ಬರೂ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಬಸವೇಶ್ವರ ನಗರ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಬಳಿಕ ಇಬ್ಬರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು.
ನಿನ್ನೆ ಮಧ್ಯಾಹ್ನ ಬಂಧಿಸಿ, ಮಧ್ಯರಾತ್ರಿ ಬಿಡುಗಡೆ ಮಾಡಿರುವುದು ಪ್ರಶ್ನೆ ಹುಟ್ಟುಹಾಕಿದೆ. ಬಂಧನ ಮಾಡಿದ ಬಳಿಕ ಸ್ಟೇಷನ್ ಬೇಲ್ ಕೊಡಬೇಕು, ಇಲ್ಲದೇ ಹೋದರೆ ಕೋರ್ಟ್ ಬೇಲ್ ಆಗಬೇಕು. ತಡರಾತ್ರಿ ನೋಟಿಸ್ ಕೊಟ್ಟು ಆರೋಪಿಗಳಾದ ವಿನಯ್, ರಜತ್ನನ್ನ ಪೊಲೀಸರು ಕಳುಹಿಸಿದ್ದಾರೆ. ಆರೋಪಿಗಳಿಗೆ ಪೊಲೀಸರೇ ಶರಣಾದರೆ ಎಂಬ ಮಾತು ಕೇಳಿಬರುತ್ತಿದೆ.