ಸಂಚಾರಿ ವಿಜಯ್ ನಿಧನರಾದ ದಿನ ‘ಲೂಸಿಯಾ’ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದರು, ”ನಿನ್ನ ಮೂಲಕ ಜೀವ ತಳೆಯಲು ಕಾಯುತ್ತಿದ್ದ ಹಲವು ಪಾತ್ರಗಳು ನಿನ್ನ ನಿರ್ಗಮನದಿಂದ ಮತ್ತೆ ನಿಧನ ಹೊಂದಿವೆ” ಎಂದು. ಈ ಮಾತು ನೂರಕ್ಕೆ ನೂರು ನಿಜ ಎನಿಸುತ್ತಿದೆ.
ಸಂಚಾರಿ ವಿಜಯ್ ಮಾಡಬೇಕಿದ್ದ ಪಾತ್ರಗಳು ಹಲವಾರಿದ್ದವು. ಹಲವು ಪಾತ್ರಗಳು ಅವರಿಗಾಗಿಯೇ ಕಾಯುತ್ತಿದ್ದವು. ಆದರೆ ಅವುಗಳನ್ನೆಲ್ಲ ತಮ್ಮ ನಟನೆ ಮೂಲಕ ಜೀವಂತ ಮಾಡುವ ಮುನ್ನವೇ ಸಂಚಾರಿ ವಿಜಯ್ ಹೋಗಿಬಿಟ್ಟಿದ್ದಾರೆ. ಅವುಗಳಲ್ಲಿ ಒಂದು ರೈತ ನಾಯಕ ಪ್ರೋ.ನಂಜುಂಡಸ್ವಾಮಿ ಅವರದ್ದು.
ಕರ್ನಾಟಕ ಕಂಡ ಧೀಮಂತ ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಜೀವನವನ್ನು ಸಿನಿಮಾ ಮಾಡಲು ನಂಜುಂಡಸ್ವಾಮಿ ಪುತ್ರ ಪಚ್ಚೆ ನಂಜುಂಡಸ್ವಾಮಿ ಬಯಸಿದ್ದರು. ನಂಜುಂಡಸ್ವಾಮಿ ಅವರ ಪಾತ್ರಕ್ಕೆ ಸಂಚಾರಿ ವಿಜಯ್ ಅವರೇ ಸೂಕ್ತ ಎಂದು ನಿರ್ಣಯಿಸಿ ಅವರೊಟ್ಟಿಗೆ ಮಾತುಕತೆ ಸಹ ಮಾಡಿದ್ದರು. ಅವರಿಬ್ಬರ ಮಾತುಕತೆಯ ಸ್ಕ್ರೀನ್ಶಾಟ್ಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ ಪಚ್ಚೆ ನಂಜುಂಡಸ್ವಾಮಿ.
ನಂಜುಂಡಸ್ವಾಮಿ ಜೀವನ ಕುರಿತ ಸಿನಿಮಾವನ್ನು ಸಂಚಾರಿ ವಿಜಯ್ ಆತ್ಮೀಯ ಸ್ನೇಹಿತ ಮಂಸೋರೆ ನಿರ್ದೇಶನ ಮಾಡುವವರಿದ್ದರು. ಈ ಬಗ್ಗೆ ಮಂಸೋರೆಯೇ ಪಚ್ಚೆ ಬಳಿ ಹೇಳಿದ್ದರು. ನಂಜುಂಡಸ್ವಾಮಿ ಅವರ ಪಾತ್ರಕ್ಕೆ ವಿಜಯ್ ಅವರನ್ನು ಸೂಚಿಸಿದ್ದಿದ್ದು ಸಹ ಅವರೇ. ಈ ಬಗ್ಗೆ ವಿವರವಾದ ಪೋಸ್ಟ್ ಅನ್ನು ಪಚ್ಚೆ ನಂಜುಂಡಸ್ವಾಮಿ ಹಂಚಿಕೊಂಡಿದ್ದಾರೆ.