ಕೃಷಿ ಕಾಯಿದೆಗಳ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆ ವಿಚಾರವಾಗಿ ನಾವು ತಂಡದ ಸಭೆಯ ವೇಳೆ ಸಣ್ಣದಾಗಿ ಚರ್ಚಿಸಿದ್ದೆವು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಫೆಬ್ರವರಿ 5ರಂದು ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಕೊಹ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ‘ಈ ವಿಚಾರವನ್ನು ನಾವು ತಂಡದ ಸಭೆಯಲ್ಲಿ ಸಣ್ಣದಾಗಿ ಚರ್ಚಿಸಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ಹೇಳಿಕೊಂಡಿದ್ದಾರೆ,’ ಎಂದಿದ್ದಾರೆ. ಈ ಬಗ್ಗೆ ಕೊಹ್ಲಿ ಹೆಚ್ಚಿನ ಮಾಹಿತಿ ನೀಡಿಲ್ಲ.
ಅಮೆರಿಕನ್ ಪಾಪ್ ಗಾಯಕಿ, ನಟಿ ರಿಹಾನ ಅವರು ಭಾರತದಲ್ಲಿನ ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್, ಕನ್ನಡಿಗ ಅನಿಲ್ ಕುಂಬ್ಳೆ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೈನಾ ನೆಹ್ವಾಲ್ ಸೇರಿ ಅನೇಕರು ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆದಿದ್ದವು.
ರಿಹಾನ್ನಾಗೆ ತಿರುಗೇಟು ನೀಡಿ ಟ್ವೀಟ್ ಮಾಡಿದ್ದವರಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟ್ವೀಟ್ ಸಂಪೂರ್ಣವಾಗಿ ರೈತ ಪರ ಅಥವಾ ವಿರೋಧ ಅನ್ನಿಸುವ ಬದಲು ಕೊಂಚ ತಟಸ್ಥ ರೀತಿಯಲ್ಲಿದ್ದಂತಿತ್ತು. ಉಳಿದಂತೆ ಸಚಿನ್, ಕುಂಬ್ಳೆ, ರೈನಾ ಮೊದಲಾದವರು ರೈತ ಪರ ವಾದಿಗಳ ಕೋಪಕ್ಕೆ ಗುರಿಯಾಗಿದ್ದರು.
ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ನೀಡಿರುವ ನಿವೇಶನದ ತಮ್ಮದೆಂದು ಹಕ್ಕು ಮಂಡಿಸಿ ದಿಲ್ಲಿ ಮೂಲದ ಇಬ್ಬರು ಸಹೋದರಿಯರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಜಾ, ರಮಾರಾಣಿ ಪಂಜಾಬಿ ಎಂಬುವವರು ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠಕ್ಕೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಫೆ.8ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.
”ನಮ್ಮ ತಂದೆ ಜ್ಞಾನಚಂದ್ರ ಪಂಜಾಬಿ ಅವರು ದೇಶ ವಿಭಜನೆ ಸಂದರ್ಭದಲ್ಲಿ, 1947ರಲ್ಲಿ ಭಾರತಕ್ಕೆ ಬಂದು, ಅಯೋಧ್ಯೆಯಲ್ಲಿ(ಆಗಿನ ಫೈಜಾಬಾದ್) ನೆಲೆಸಿದ್ದರು. ಧನ್ನಿಪುರ ಗ್ರಾಮದಲ್ಲಿ ತಂದೆಗೆ ನಜುಲ್ ಇಲಾಖೆಯು 28 ಎಕರೆ ಜಮೀನನ್ನು ನೀಡಿತ್ತು. 5 ವರ್ಷಗಳ ಅವಧಿಗೆ ನೀಡಿದ್ದ ಜಮೀನಿನ ಮಾಲೀಕತ್ವ ನಂತರವೂ ಮುಂದುವರಿಯಿತು. ಬಳಿಕ ಕಂದಾಯ ಇಲಾಖೆಯಲ್ಲಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತಂದೆ ಹೆಸರನ್ನು ಸೇರಿಸಲಾಗಿತ್ತು,” ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.
ನಂತರದ ದಿನಗಳಲ್ಲಿ ತಂದೆಯ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ತಂದೆಯವರು ಅಯೋಧ್ಯೆಯಲ್ಲಿನ ನಜುಲ್ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಲಾಗಿತ್ತು. ವಿಚಾರಣೆ ಬಳಿಕ ಅಧಿಕಾರಿಗಳು ಪುನಃ ತಂದೆಯವರ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಿದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸದೇ, 28 ಎಕರೆ ಪೈಕಿ 5 ಎಕರೆಯನ್ನು ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಐದು ಎಕರೆ ಜಾಗವನ್ನು 2019ರ ನ.7ರಂದು ನೀಡಲಾಗಿದೆ. ಈ ನಿವೇಶನದಲ್ಲಿಮಸೀದಿ ನಿರ್ಮಾಣಕ್ಕೆ ಜ. 26ರಂದು ಶಿಲಾನ್ಯಾಸ ನೆರವೇರಿಸಲಾಗಿದೆ.