ಸರ್ಕಾರಿ ನೌಕರಿಗೆ ಜಾಹೀರಾತು ನೋಡಿರುರ್ತೀವಿ, ಮಲ್ಟಿ ನ್ಯಾಷನಲ್ ಕಂಪನಿಯೂ ಕೆಲಸ ಖಾಲಿ ಇರೋ ಬಗ್ಗೆ ಅಡ್ವಟೈರ್ಸ್ ಕೊಟ್ಟಿರುತ್ತೆ. ಸಣ್ಣ ಪುಟ್ಟ ಕಂಪನಿಗಳು ಸಹ ಟಿವಿ ಅಥವಾ ಪತ್ರಿಕೆಗಳಲ್ಲಿ ಜಾಹಿರಾತು ಕೊಡುತ್ತಿವೆ. ಆದರೆ ಇಲ್ಲೊಂದು ಕಂಪನಿ ವಿಶಿಷ್ಟವಾಗಿ ಜಾಹಿರಾತು ನೀಡಿದೆ. ಟೈಲರ್ ಬೇಕು, ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ಅನ್ನೋ ಹಾಗೆ ರೈತರು ಬೇಕಾಗಿದ್ದಾರೆ ಅನ್ನೋ ಜಾಹೀರಾತು ನೀಡಿದೆ.ಈ ಕಂಪನಿ ಹೆಸರು ಗ್ರಾಸ್ ರೂಟ್ಸ್ ಆರ್ಗ್ಯಾನಿಕ್ . ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನಿಯಲ್ಲಿ ತಾಂತ್ರಿಕ ಕ್ಷೇತ್ರದ ಆರು ವೃತ್ತಿಪರರ ತಂಡವೊಂದು ಗ್ರಾಸ್ರೂಟ್ಸ್ ಆರ್ಗ್ಯಾನಿಕ್ ಅನ್ನು ಪ್ರಾರಂಭಿಸಿತು. ಸ್ಥಳೀಯ ಯುವಕರಾದ ಕಮಲೇಶ್ ತನ್ನ ಗೆಳೆಯರೊಂದಿಗೆ ಸೇರಿ ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಸ್ ರೂಟ್ಸ್ ಆರ್ಗ್ಯಾನಿಕ್ ಹೆಸರಿನಲ್ಲಿ ಗಾಣದಿಂದ ಎಣ್ಣೆ ತೆಗೆಯುವ ಘಟಕವನ್ನು ಆರಂಭಿಸಿದ್ದರು.
ಕಳೆದ ಎರಡು ವರ್ಷಗಳಿಂದ ಸಕ್ರಿಯವಾಗಿರುವ ಈ ಕಂಪನಿಯು ರೈತರು ಬೆಳೆದ ಬೆಳೆಗಳನ್ನು ಖರೀದಿಸಿ, ಪಕ್ಕಾ ದೇಸೀ ಶೈಲಿಯಲ್ಲಿ ಎತ್ತುಗಳನ್ನು ಬಳಸಿ ಗಾಣದಿಂದ ಎಣ್ಣೆ ತೆಗೆಯುತ್ತಾರೆ. ಈ ಕಂಪನಿಯು ಸುಮಾರು ೮೦೦ ಕ್ಕೂ ಹೆಚ್ಚು ಮನೆಗಳಿಗೆ ಈ ಶುದ್ಧ ಕಡಲೆಕಾಯಿ ಸೇರಿದಂತೆ ಇತರೆ ಆಯಿಲ್ ಗಳನ್ನು ವಿತರಿಸುತ್ತಿದೆ. ಇದೀಗ ಮತ್ತಷ್ಟು ರೈತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಾಹಿರಾತು ನೀಡಿದೆ.
ಅದರಲ್ಲೂ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಕೈಗಾರಿಕೆಗಳು ಮತ್ತು ವಿವಿಧ ಖಾಸಗಿ ಕಂಪನಿಗಳು ನೌಕರರನ್ನು ವಜಾಗೊಳಿಸಲು, ಸಂಬಳವನ್ನು ಕಡಿಮೆ ಮಾಡುವ ಕಠಿಣ ಕ್ರಮಗಳನ್ನು ಕೈಗೊಳುತ್ತಿವೆ. ಆದರೆ, ಮಂಡ್ಯದಲ್ಲಿ ಕೃಷಿಗೆ ಮೀಸಲಾಗಿರುವ ಗ್ರಾಸ್ ರೂಟ್ಸ್ ಆರ್ಗ್ಯಾನಿಕ್, ವಿಶ್ವದ ಅತ್ಯಂತ ಹಳೆಯ ವೃತ್ತಿಗಳಲ್ಲಿ ಒಂದಾದ ಕೃಷಿಯಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವವರಿಗೆ ಉದ್ಯೋಗವನ್ನು ನೀಡುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವರು ನೀಡುತ್ತಿರುವ ವೇತನವು ಕಡಿಮೆ ಅಲ್ಲ ಅನ್ನೋದು ವಿಶೇಷ. ಉಚಿತ ಊಟ ಮತ್ತು ವಸತಿಯೊಂದಿಗೆ 10,000 ರೂಪಾಯಿಗಳಿಂದ ಪ್ರಾರಂಭಿಸಿ 30,000 ರೂಪಾಯಿ ಸಂಬಳ ನೀಡುವುದಾಗಿ ತನ್ನ ವೆಬ್ ಸೈಟ್ ನಲ್ಲಿ ರೈತರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡಿದೆ..
ಸದ್ಯ ಜಮೀನನ್ನು ಸ್ವಚ್ಛಗೊಳಿಸುವುದು, ಉಳುಮೆ ಮಾಡುವುದು, ಬಿತ್ತನೆ ಮಾಡುವುದು ಮತ್ತು ಮಾರಾಟ ಮಾಡುವ ಕೆಲಸಕ್ಕೆ ಆಹ್ವಾನಿಸಿದೆ.
ಕೇವಲ ರೈತರಿಗಷ್ಟೆ ಉದ್ಯೋಗ ನೀಡದೆ ಎಣ್ಣೆ ತಯಾರಿಸಲು ಹೆಚ್ಚಾಗಿ ಮಹಿಳೆಯರಿಗೆ ಅವಕಾಶ ಒದಗಿಸಿದ್ದು, ಮಹಿಳಾ ಸಬಲೀಕರಣದತ್ತವೂ ಗಮನಹರಿಸಿದೆ. ಈಗಾಗಲೇ ಕೃಷಿಯಲ್ಲಿ ಆಸಕ್ತಿ ಇರುವವರು ಈ ಕಂಪನಿಯಲ್ಲಿ ಸೇರಿಕೊಂಡಿದ್ದಾರೆ. ಅವರವರ ವಿದ್ಯಾರ್ಹತೆ ಮತ್ತು ಕೃಷಿ ಜ್ಞಾನಕ್ಕೆ ತಕ್ಕಂತೆ ಇಲ್ಲಿ ಕೆಲಸಗಳನದನು ವಿಂಗಡಿಸಿದೆ. ಇತ್ತೀಚಿನಲ್ಲಿ ಕೃಷಿ ಎಂದರೆ ಮೂಗು ಮುರಿಯುವ ಮಂದಿಯ ಮಧ್ಯೆ ಈ ರೀತಿ ಸಾಫ್ಟ್ವೇರ್ ಹುಡುಗರೆಲ್ಲಾ ಸೇರಿ ಕಂಪನಿ ಆರಂಭಿಸಿರುವ ಗ್ರಾಸ್ ರೂಟ್ಸ್ ಆರ್ಗ್ಯಾನಿಕ್ ಉದ್ಯಮವು ರೈತರು ಮತ್ತು ಮಹಿಳೆಯರ ಬದುಕಿಗೆ ಆಶಾಕಿರಣವಾಗಿದೆ.