ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ನವಜಾತ ಶಿಶುಗಳಿಗೆ ವೆಂಟಿಲೇಟರ್ ಒದಗಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಕೋವಿಡ್ 19 ನಿಯಂತ್ರಣ ಕುರಿತು ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು, ವೈದ್ಯರು, ಶುಶ್ರೂಷಕರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿ ಒದಗಿಸಲಾಗಿದೆ. ಆಸ್ಪತ್ರೆಗಳಿಗೆ ಅಗತ್ಯ ಯಂತ್ರೋಪಕರಣಗಳನ್ನು ಪೂರೈಸಲಾಗಿದೆ. ಹೊಸ ಆರ್ಟಿಪಿಸಿಆರ್ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದರು.
ನವಜಾತ ಶಿಶುಗಳ ಆರೈಕಕೆಗೆ ಬಳಸುವ 800 ವೆಂಟಿಲೇಟರ್ಗಳನ್ನು ಪಿಎಂ ಕೇರ್ಸ್ ಅಡಿಯಲ್ಲಿ ತುರ್ತಾಗಿ ರಾಜ್ಯಕ್ಕೆ ಒದಗಿಸಿ ಎಂದು ಕೇಳಿದರು.
ಈವರೆಗೆ ರಾಜ್ಯದಲ್ಲಿ 2.62 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿತ್ಯ ಐದು ಲಕ್ಷ ಡೋಸ್ಗಳಂತೆ ತಿಂಗಳಿಗೆ ಕನಿಷ್ಠ 1.5 ಕೋಟಿ ಲಸಿಕೆಯನ್ನು ರಾಜ್ಯಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಅವರ ಮುಂದಿರಿಸಿದ್ದಾರೆ.
ಅದರಲ್ಲಿ ಪ್ರಮುಖವಾಗಿ, ರಾಜ್ಯದಲ್ಲಿ ಕೊರೊನಾ ಲಸಿಕೆಯ ತೀವ್ರ ಅಭಾವವಿದೆ, ಪ್ರತಿ ತಿಂಗಳು ಕನಿಷ್ಠ 1.5 ಕೋಟಿ ಲಸಿಕೆಯನ್ನು ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಹೊಸ ಕೊರೊನಾ ಪ್ರಕರಣಲ್ಲಿ ಇಳಿಮುಖವಾಗುತ್ತಿದೆ,ಈಗ ದಿನಕ್ಕೆ 1,900 ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ. ರಾಜ್ಯದಲ್ಲಿ ಪ್ರಕರಣಗಳ ದೃಢ ಪ್ರಮಾಣ ದರ ಶೇ.1.42 ಮತ್ತು ಮರಣ ಪ್ರಮಾಣ ಶೇ.1.5ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ ಮೂರನೇ ಅಲೆ ಎದುರಿಸಲು ಕರ್ನಾಟಕ ಸಂಪೂರ್ಣ ಸಜ್ಜಾಗಿದೆ, ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್ಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ, ಆಮ್ಲಜನಕ ಸಹಿತ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ.