ಸುಮಾರು ಎರಡು ವರ್ಷಗಳ ಹಿಂದೆ ಆಸೆ, ಆಮಿಷಗಳಿಗೆ ಒಳಗಾಗಿ ಹೊಸದುರ್ಗ ಶಾಸಕ ತಾಯಿ ಹಾಗೂ ನಾಲ್ಕು ಕುಟುಂಬಗಳು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಮಾತುಗಳು ಕೇಳಿಬಂದಿದ್ದವು.
ಇದೀಗ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ರವರ ತಾಯಿ ಹಾಗೂ ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಾಲು ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೇಸರಿ ಶಾಲು ಹಾಕಿ, ತೀರ್ಥ- ಪ್ರಸಾದ, ಮಂಜುನಾಥ ಸ್ವಾಮಿಯ ಫೋಟೋ ನೀಡಿ ಸ್ವಾಗತಿಸುವ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಬರಮಾಡಿಕೊಳ್ಳಲಾಗಿದೆ.
ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದವು. ಭಾನುವಾರ ಹಿಂದೂ ಧರ್ಮಕ್ಕೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ವಾಪಸ್ ಬಂದಿದ್ದಾರೆ.
ಇತ್ತೀಚೆಗೆ ಹೊಸದುರ್ಗ ತಾಲ್ಲೂಕಿನಲ್ಲಿ ಅತಿಹೆಚ್ಚು ಹಿಂದೂ ಧರ್ಮದ ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಬಗ್ಗೆ ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್, “ನನ್ನ ಮತ ಕ್ಷೇತ್ರದಲ್ಲಿ ಹೆಚ್ಚು ಮತಾಂತರ ನಡೆಯುತ್ತಿದೆ. ಅದರಲ್ಲೂ ನನಗೆ ಜನ್ಮ ನೀಡಿದ ತಾಯಿಯೇ ಮತಾಂತರವಾಗಿದ್ದಾರೆ,” ಎಂದು ಕ್ರೈಸ್ತ ಮಿಷನರಿಗಳ ವಿರುದ್ಧ ಸಿಡಿದೆದ್ದಿದ್ದರು.