ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-19
ಮಿಲನ
ಮಿಲನ…..ಸಿನ್ಮಾ ಹೊಸದು, ಅಂದ್ರೆ ತೀರಾ ಹಳೆಯದಲ್ಲದ ಈಗಿನ ಯೂತ್ಸ್ ಲೈಕ್ ಮಾಡೋ ಒಂದು ಫ್ಯಾಮಿಲಿ ಡ್ರಾಮಾ ಕತೆ ಮಿಲನ ಚಿತ್ರದಲ್ಲಿದೆ. ಈಗಿನ ಕಾಲದ ಸುಮಧುರ ಹಾಡುಗಳ ಸರದಾರ ಜಯಂತ್ ಕಾಯ್ಕಿಣಿ ಅಂದ್ರೆ ತಪ್ಪಾಗಲ್ಲ ಬಿಡಿ. ಯಾಕಂದ್ರೆ ಮೆಲೋಡಿ ಹಾಡುಗಳಿಗೆ ಜೀವ ತುಂಬಿ, ಯಾವುದೇ ಪದಗಳಿಗೆ ಹಾನಿ ಮಾಡದೇ ಒಂಡು ಹಾಡಿನ ರೂಪ ಕೊಡೋದ್ರಲ್ಲಿ ಜಯಂತ್ ಎತ್ತಿದ ಕೈ. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ. ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ. ನಿಜ ಅಲ್ವಾ.., ನಮ್ಮ ಮನದಲ್ಲಿರೋ ನೋವಿನ ಭಾವನೆಗಳು ಯಾವ ಪದಗಳು ಕೊಡ್ಬೇಕು ಅಂತ ಗೊಂದಲದಲ್ಲಿರೋರಿಗೆ ಈ ಹಾಡು 200% ಸೂಟ್ ಆಗುತ್ತೆ. ಪ್ರೀತಿಸಿದವನನ್ನು ಬಿಟ್ಟು ಬೇರೊಬ್ಬನನ್ನು, ಅಂದ್ರೆ ನಾಯಕನನ್ನು ಮದುವೆಯಾಗೋ ನಾಯಕಿ, ಕೊನೆಗೆ ಸ್ಲೋಲಿ ಗಂಡನನ್ನೇ ಮನಸಲ್ಲಿ ಇಷ್ಟ ಪಡೋಕೆ ಶುರು ಮಾಡ್ತಾಳೆ. ಆದ್ರೆ ಗಂಡನೂ ದೂರ ಆಗೋ ಸಂದರ್ಭಲ್ಲಿ ಬರೋ ಹಾಡಿದು.
ಜಯಂತ್ ಅವ್ರ ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಹಾಡು ಸೂಪರ್ ಡೂಪರ್ ಹಿಟ್ ಆದ ಸಮಯ ಅದು. ಇಂಥದ್ದೇ ಹಾಡು ಬೇಕು ಅಂಥ ಎಲ್ಲರೂ ಕೇಳೋರೇ. ಆದ್ರೆ ಜಯಂತರಿಗೆ ಆ ಹಾಡಿನಿಂದ ಹೊರಬಂದು ಮತ್ತೊಂದು ವಿಭಿನ್ನವಾದ ಹಾಡು ಬರೀಬೇಕು ಅನ್ನೋ ಆಸೆ. ಆದ್ರೆ ಎಷ್ಟು ಬೇಡವೆಂದರೂ ಅನಿಸುತಿದೆ ಯಾಕೋ ಇಂದು ಹಾಡಿನ ರಾಗವೇ ನೆನಪಾಗ್ತಾ ಇತ್ತು. ಇದೇ ಟೈಮಲ್ಲೇ ಮಿಲನ ಚಿತ್ರಕ್ಕೆ ಸಾಹಿತ್ಯ ಬರೀಬೇಕಿತ್ತು. ಬೇರೆ ಏನೆ ನೆನಪು ಮಾಡಿಕೊಂಡ್ರು ಹಳೇ ನೆನಪು, ಹಳೇ ರಾಗ ಕಾಡುತ್ತಲೇ ಇತ್ತು. ಇದೊಳ್ಳೆ ಸರಿಹೊಯೋಯ್ತಲ್ಲಾ, ಮುಂಗಾರುಮಳೆ ಅಬ್ಬರ ಕಡಿಮೆಯಾದ್ರೂ, ಆ ಹಾಡು ನನ್ನನ್ನು ಬಿಡ್ತಾ ಇಲ್ಲ ಅಂದುಕೊಂಡ್ರಂತೆ ಜಯಂತ್ ಕಾಯ್ಕಿಣಿ. ಆಗಲೇ ಜಯಂತ್ ಅವ್ರಿಗೆ ಹೊಸ ಸಾಲು ಹೊಳೆದದ್ದು ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ. ಹಾಡಿನ ಪಲ್ಲವಿ ಹಾಗೂ ಅನುಪಲ್ಲವಿಯನ್ನ ಕೇಳಿದಾಗ ಚಿತ್ರದ ಸನ್ನಿವೇಶಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತೆ ಅನ್ನಿಸತ್ತೆ. ಹೀಗೆ ಎಲ್ಲಾ ಭಾವನೆಗಳು ಒಂದೊಂದಾಗಿಯೇ ಬಂದು ಜಾಗ ಪಡೆದುಕೊಂಡು ಹಾಡಾಗಿ ಗೊತ್ತಿಲ್ಲದೆಯೇ ಒಂದು ಸೂಪರ್ ಗೀತೆಯಾಗಿ ಉಳಿದುಹೋಗಿದೆ.
-ಅಕ್ಷತಾ