ಮಲ್ಯ-ನೀರವ್ ಬಳಿಕ ದೇಶ ಬಿಡ್ತಾರಾ ಅನಿಲ್ ಅಂಬಾನಿ..?
ವಿಜಯ್ ಮಲ್ಯ ಆಯ್ತು.. ನೀರವ್ ಮೋದಿ ಆಯ್ತು.. ಈಗ ದೇಶ ಬಿಟ್ಟು ಹೋಗುವ ಸರದಿ ಅನಿಲ್ ಅಂಬಾನಿಯದ್ದು..? ಇಂಥಾದ್ದೊಂದು ಪ್ರಶ್ನೆ ಇಡೀ ದೇಶವನ್ನೇ ಕಾಡುತ್ತಿದೆ. ಸಾವಿರಾರು ಕೋಟಿ ಸಾಲ ಮಾಡಿರುವ ಅನಿಲ್ ಅಂಬಾನಿ ದೇಶ ಬಿಟ್ಟು ಹೋಗ್ತಾರಾ ಎನ್ನುವ ಚರ್ಚೆಯೂ ಆರಂಭವಾಗಿದೆ. ಅಷ್ಟೇ ಅಲ್ಲ, ಅನಿಲ್ ಅಂಬಾನಿ ದೇಶ ತೊರೆಯದಂತೆ ನೋಡಿಕೊಳ್ಳಬೇಕು ಎಂದು ಸ್ವತಃ ಸುಪ್ರಿಂ ಕೋರ್ಟ್ನಲ್ಲಿ ಅರ್ಜಿಯೊಂದು ದಾಖಲಾಗಿದೆ.
ಅಚ್ಚರಿ ಎನಿಸಿದರೂ ಇದು ಸತ್ಯ. ರಿಲಯನ್ಸ್ ಸಂಸ್ಥೆಯ ಮಾಲೀಕ ಅನಿಲ್ ಅಂಬಾನಿ ದೇಶ ಬಿಟ್ಟು ಓಡಿ ಹೋಗ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರಣ ಇಷ್ಟೆ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ಟೆಲಿಕಾಂ ಉಪಕರಣಗಳ ಪೂರೈಕೆ ಮಾಡುವಂತಾ ಎರಿಕ್ಸನ್ ಕಂಪನಿಯಿಂದ ತರಂಗಾತರ ಹಂಚಿಕೆ ಹಾಗೂ ಮೊಬೈಲ್ ಬಿಡಿ ಭಾಗಗಳ ಮಾರಾಟ ವಹಿವಾಟು ನಡೆಸಿತ್ತು. ಒಟ್ಟು 1,147 ಕೋಟಿ ರೂಪಾಯಿ ಮೊತ್ತದ ವ್ಯವಹಾರದಲ್ಲಿ ರಿಲಯನ್ಸ್ ಸಂಸ್ಥೆ 557 ಕೋಟಿ ಹಣವನ್ನ ಬಾಕಿ ಉಳಿಸಿಕೊಂಡಿದೆ.
ಈ ಬಗ್ಗೆ ಎರಿಕ್ಸನ್ ಕಂಪನಿ ಹಲವಾರು ಬಾರಿ ಬಾಕಿ ಪಾವತಿಸುವಂತೆ ಮನವಿ ಮಾಡಿತ್ತು. ಆದರೆ ಅನಿಲ್ ಅಂಬಾನಿ ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಎರಿಕ್ಸನ್ ಸಂಸ್ಥೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ನಷ್ಟದಲ್ಲಿ ಮುಳುಗಿದ್ದು, ಸಂಸ್ಥೆಯ ಅನಿಲ್ ಅಂಬಾನಿ ಮಾಲೀಕ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲದೇ, ಅನಿಲ್ ಅಂಬಾನಿ ದೇಶ ಬಿಡುವಂತೆ ತಡೆದು ತಮಗೆ ನೀಡಬೇಕಾದ 557 ಕೋಟಿ ಬಾಕಿ ಹಣವನ್ನ ಕೊಡಿಸುವಂತೆ ಮನವಿ ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ 60 ದಿನಗಳ ಕಾಲಾವಕಾಶ ಕೋರಿದೆ. ಆದರೆ ಎರಿಕ್ಸನ್ಸ್ ಕಂಪನಿ ಇದನ್ನ ತಿರಸ್ಕತಿಸಿದೆ. ಯಾಕಂದ್ರೆ, ಅನಿಲ್ ಅಂಬಾನಿ ಒಟ್ಟು 38 ಕಂಪನಿಗಳಿಗೆ ನೀಡಬೇಕಾದ ಬಾಕಿಯನ್ನ ಇದುವರೆಗೆ ಕೊಟ್ಟಿಲ್ಲ. ಹೀಗಾಗಿ ಅವರಿಂದ ಹಣ ನೀಡಲು ಸಾಧ್ಯವಿಲ್ಲ. ಅವರು ದೇಶ ಬಿಡುವ ಸಾಧ್ಯತೆ ಇದೆ ಎಂದು ಸುಪ್ರಿಂ ಕೋರ್ಟ್ಗೆ ತಿಳಿಸಿದೆ.