ಇತ್ತೀಚೆಗಷ್ಟೇ ಭಾರಿ ಮಳೆಗೆ ನಲುಗಿ ಹೋದ ಕೇರಳ ರಾಜ್ಯದಲ್ಲಿ ಪುನಃ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕೇರಳ ರಾಜ್ಯದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಇಡುಕ್ಕಿ, ತ್ರಿಶೂರ್ ಹಾಗೂ ಪಲಕ್ಕಾಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕಳೆದ ಭಾನುವಾರದಿಂದಲೇ ಭಾರಿ ಮಳೆ ಸುರಿಯುತ್ತಿದೆ. ಮಳೆ ಇನ್ನೂ ಹೆಚ್ಚುವ ಸಾಧ್ಯತೆ ಇದ್ದು, ಮೀನುಗಾರರು ಕೂಡಲೇ ಸುರಕ್ಷಿತವಾಗಿ ದಡ ಸೇರುವಂತೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈಗಾಗಲೇ NDRF ತಂಡವನ್ನ ಕೂಡ ಕರೆಸಿಕೊಂಡಿದ್ದು, ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಸಿದ್ದಾರೆ.
ಕೇರಳಕ್ಕೆ ಆಗಮಿಸಿರುವ ಪ್ರವಾಸಿಗರಿಗೂ ಎಚ್ಚರಿಕೆಯನ್ನ ರವಾನೆ ಮಾಡಲಾಗಿದ್ದು ಬೆಟ್ಟ ಗುಡ್ಡಗಳ ವೀಕ್ಷಣೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಅದರಲ್ಲೂ ಮುನ್ನಾರ್ ಪ್ರದೇಶದ ಪ್ರವಾಸಿಗರಿಗೆ ಸುರಕ್ಷಿತ ಸ್ಥಳದಲ್ಲಿ ಉಳಿಯುವಂತೆ ಮಾಹಿತಿ ರವಾನಿಸಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಉಂಟಾದ ಭಾರಿ ಮಳೆ ಪ್ರವಾಹದಿಂದಾಗಿ ಕೇರಳದಲ್ಲಿ 443 ಜನ ಸಾವನ್ನಪ್ಪಿದ್ದರು. 14 ಜಿಲ್ಲೆಗಳ 56 ಲಕ್ಷ ಜನ ನಿರಾಶ್ರಿತರಾಗಿದ್ದರು. ಹೀಗಾಗಿಯೇ ಕೇರಳ ಸರ್ಕಾರ ಭಾರಿ ಮುನ್ನೆಚರಿಕಾ ಕ್ರಮಗಳನ್ನ ಕೈಗೊಂಡು ರೆಡ್ ಅಲರ್ಟ್ ಘೋಷಣೆ ಮಾಡಿದೆ.