ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಅಂತಿಮ ಘಟ್ಟಕ್ಕೆ ತಲುಪಿದೆ. ಮುಂದೆ ಈ ತಂಡಗಳ ನಡುವೆ ಏಕದಿನ ಹಣಾಹಣಿ ನಡೆಯಲಿದ್ದು ಅದಕ್ಕಾಗಿ ಇಂದು ಭಾರತ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2015ರಲ್ಲಿ ಪ್ರಸಿದ್ಧ್ ಕೃಷ್ಣ ಕರ್ನಾಟಕ ತಂಡಕ್ಕೆ ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಪದಾರ್ಪಣೆಯನ್ನು ಮಾಡಿದರು. 2016-17ರಲ್ಲಿ ವಿಜಯ್ ಹಜಾರೆ ಟೂರ್ನಿಗೆ ಆಯ್ಕೆಯಾಗುವ ಮೂಲಕ ಲಿಸ್ಟ್ ಎ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೆ 2017-18ರಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅವಕಾಶವನ್ನು ಪಡೆದುಕೊಂಡರು.
2018ರ ಆಗಸ್ಟ್ ತಿಂಗಳಿನಲ್ಲಿ ಪ್ರಸಿದ್ಧ್ ಕೃಷ್ಣ ಭಾರತ ಎ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ 2018 ‘ಎ’ ತಂಡಗಳ ಚತುಷ್ಕೋನ ಸರಣಿಯಲ್ಲಿ ಪಾಕ್ಗೊಂಡಿದ್ದಾರೆ. 2018ರಲ್ಲಿ ಡಿಸೆಂಬರ್ನಲ್ಲಿ ‘2018 ಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್’ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು. ಈಗ ಭಾರತ ಹಿರಿಯರ ತಂಡದಲ್ಲಿ ಮೊದಲ ಬಾರಿಗೆ ಅವಕಾಶವನ್ನು ಪಡೆದುಕೊಲ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಆಟಗಾರರನ್ನು ಕಡೆಗಣಿಸಲಾಗಿದೆ. ಪೃಥ್ವಿ ಶಾ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ 8 ಪಂದ್ಯಗಳಿಂದ 827 ರನ್ ಗಳಿಸಿದ್ದರು. ಕರ್ನಾಟಕದ ದೇವದತ್ ಪಡಿಕ್ಕಲ್ 7 ಪಂದ್ಯಗಳಿಂದ 737 ರನ್ ಗಳಿಸಿ ಮಿಂಚಿದ್ದಾರೆ. ಕರ್ನಾಟಕ ತಂಡದ ನಾಯಕ ಸಮರ್ಥ್ ಕೂಡ 100ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ ಮಿಂಚಿದ ಆಟಗಾರನಾಗಿದ್ದಾರೆ.