ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ತಂಡ ಪ್ರಕಟವಾದ ಬಳಿಕ ಸದ್ಯ ಶ್ರೀಲಂಕಾ ವಿರುದ್ಧದ ಟೀಮ್ ಇಂಡಿಯಾ ಪ್ರವಾಸದ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳು ನಡೆಯುತ್ತಿವೆ. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡಕ್ಕೆ ಇತ್ತೀಚಿಗಷ್ಟೆ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆದರೆ ಬಿಸಿಸಿಐ ಶ್ರೀಲಂಕಾ ಪ್ರವಾಸಕ್ಕೆ ಇನ್ನೂ ಸಹ ಟೀಮ್ ಇಂಡಿಯಾ ತಂಡವನ್ನು ಘೋಷಣೆ ಮಾಡಿಲ್ಲ.
ಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗಳಿಗೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಿಂಚಿರುವ ಕೆಲ ಆಟಗಾರರು ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದೆ ಉಳಿದಿರುವ ಟೀಮ್ ಇಂಡಿಯಾದ ಕೆಲ ಸ್ಟಾರ್ ಆಟಗಾರರನ್ನೊಳಗೊಂಡ ತಂಡವನ್ನು ಬಿಸಿಸಿಐ ಘೋಷಿಸಲಿದೆ ಎನ್ನಲಾಗುತ್ತಿದೆ. ಇದರ ಜೊತೆ ಲಂಕಾ ಪ್ರವಾಸಕ್ಕೆ ತೆರಳಲಿರುವ ಟೀಮ್ ಇಂಡಿಯಾ ತಂಡವನ್ನು ಯಾರು ಮುನ್ನಡೆಸಬೇಕು ಎಂಬ ಚರ್ಚೆ ಜೋರಾಗಿದೆ. ಈಗಾಗಲೇ ಹಲವು ಮಾಜಿ ಆಟಗಾರರು ಲಂಕಾ ಪ್ರವಾಸದಲ್ಲಿ ಭಾರತವನ್ನು ಯಾರು ಮುನ್ನಡೆಸಬೇಕೆಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಇದೀಗ ಯುವ ಆಟಗಾರ ದೀಪಕ್ ಚಾಹರ್ ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.
‘ಲಂಕಾ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಬೇಕು. ಟೀಮ್ ಇಂಡಿಯಾ ಪರ ಹಲವಾರು ವರ್ಷಗಳಿಂದ ಆಡುತ್ತಿರುವ ಧವನ್ ಉತ್ತಮ ಅನುಭವವನ್ನು ಹೊಂದಿದ್ದಾರೆ ಹಾಗೂ ಹಿರಿಯ ಆಟಗಾರನಾಗಿದ್ದಾರೆ. ನನ್ನ ಪ್ರಕಾರ ಹಿರಿಯ ಆಟಗಾರರು ತಂಡದ ನಾಯಕತ್ವವನ್ನು ವಹಿಸಿಕೊಳ್ಳಬೇಕು, ಆಗ ಮಾತ್ರ ಉಳಿದ ಆಟಗಾರರು ನಾಯಕನಿಗೆ ಗೌರವವನ್ನು ಕೊಟ್ಟು ಆತ ತೆಗೆದುಕೊಳ್ಳುವ ನಿರ್ಣಯವನ್ನು ಪಾಲಿಸುತ್ತಾರೆ. ಹೀಗಾಗಿ ತಂಡದ ಹಿರಿಯ ಆಟಗಾರ ಧವನ್ ಅವರು ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿಕೊಳ್ಳುವುದು ಉತ್ತಮ’ ಎಂದು ದೀಪಕ್ ಚಾಹರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.