ಹುಚ್ಚನಿಗೆ ಹೆಚ್ಚು ತಿನ್ನಿಸಿದ್ರೆ ಆತನ ಹುಚ್ಚು ಬಿಡುವುದಿಲ್ಲ: ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟ ಸಿ.ಟಿ.ರವಿ
ಬೆಳಗಾವಿ: ಹುಚ್ಚನಿಗೆ ಹೆಚ್ಚು ತಿನ್ನಿಸಿದ್ರೆ ಆತನ ಹುಚ್ಚು ಬಿಡುವುದಿಲ್ಲ ಎಂದು ಎಂಎಲ್ಸಿ ಸಿ.ಟಿ.ರವಿ ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಕೇಸ್ ವಾಪಸ್ ತೆಗೆಯುತ್ತೀರಿ. ಮುಸ್ಲಿಮರಿಗೆ ಬಜೆಟ್ನಲ್ಲಿ ಆದ್ಯತೆ ಕೊಡಲಾಗಿದೆ. ಇದೊಂದು ಕಮ್ಯುನಲ್ ಬಜೆಟ್ ಆಗಿದೆ. ಮುಲ್ಲಾ, ಮುಸ್ಲಿಂ ಗುರುಗಳ ಗೌರವ ಧನ ಹೆಚ್ಚಳ ಮಾಡಿದ್ದಾರೆ.
ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ಯೋಜನೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಕಳೆದ ವರ್ಷವೂ ಬಜೆಟ್ನಲ್ಲಿ ಹೇಳಿದ್ರು, ಆದ್ರೆ ಏನೂ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟರೂ ಇವರು ಆರೋಪ ಮಾಡ್ತಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವಿಲ್ಲ. ಇದು ಕಾಂಗ್ರೆಸ್ ಪಕ್ಷದ ಬಜೆಟ್ ಅಲ್ಲ. ಹುಚ್ಚನಿಗೆ ಹೆಚ್ಚು ತಿನ್ನಿಸಿದ್ರೆ ಆತನ ಹುಚ್ಚು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಈ ಬಜೆಟ್ನಲ್ಲಿ ಕೆಲವರಿಗೆ ಖುಷಿಯಾಗಿದೆ. ಇದು ಕಾಂಗ್ರೆಸ್ ಬಜೆಟ್ ಅಥವಾ ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್ ಬ್ಯಾಂಕ್ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ನ ಕೋಮುವಾದಿ ರಾಜಕಾರಣ ತೋರಿಸುತ್ತದೆ ಎಂದರು.