ಬೈಕ್ ಟ್ಯಾಕ್ಸಿ ವಿರುದ್ಧ ಪೊಲೀಸರ ಕಾರ್ಯಾಚರಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
ಬೆಂಗಳೂರು:- ಬೈಕ್ ಟ್ಯಾಕ್ಸಿ ವಿರುದ್ಧ ಪೊಲೀಸರ ಕಾರ್ಯಾಚರಣೆ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಸರ್ಕಾರದ ನಿಲುವು ಏನು ಎಂಬುದನ್ನು ಈಗಾಗಲೇ ನಾವು ಹೈಕೋರ್ಟ್ಗೆ ತಿಳಿಸಿದ್ದೇವೆ. ಕೊರಿಯರ್, ಪಾರ್ಸೆಲ್ ಹೆಸರಿನಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಕಾರಣ ನಮ್ಮ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಹೈಕೋರ್ಟ್ ಆರು ವಾರಗಳ ಗಡುವು ನೀಡಿತ್ತು. ಈಗ ಆ ಅವಧಿ ಮುಗಿದು ಹೋಗಿದೆ. ಹೀಗಾಗಿ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಉಬರ್ ಸೇರಿದಂತೆ ಕೆಲವು ಬೈಕ್ ಟ್ಯಾಕ್ಸಿಗಳು ಈ ಹಿಂದೆ ಕೂಡ ಪಾರ್ಸೆಲ್ ಸೇವೆ ಒದಗಿಸುತ್ತಿದ್ದವು. ಇದೀಗ ಹೈಕೋರ್ಟ್ ಆದೇಶದಂತೆ, ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡ ಬೆನ್ನಲ್ಲೇ ಆ್ಯಪ್ಗಳಲ್ಲಿ ‘ಬೈಕ್ ಟ್ಯಾಕ್ಸಿ’ ಎಂಬ ಆಯ್ಕೆ ಇದ್ದುದನ್ನು ‘ಪಾರ್ಸೆಲ್’ ಎಂದು ಬದಲಾಯಿಸಿವೆ. ಅಲ್ಲದೆ, ಪಾರ್ಸೆಲ್ ಸೇವೆ ಮುಂದುವರಿಸಿವೆ. ಆದರೆ, ಪಾರ್ಸೆಲ್ ಹೆಸರಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅಂಥ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.