ರಥೋತ್ಸವದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ. ನಿಮ್ಮೂರ ದೇವರ ರಥೋತ್ಸವಕ್ಕೆ ತಪ್ಪದೇ ಹಾಜುರಿರ್ತೀರಿ ಅಲ್ವಾ…? ನಮ್ಮ ಪ್ರಮುಖ ಆಚರಣೆಗಳಲ್ಲಿ ರಥೋತ್ಸವ ಸಹ ಒಂದು. ನಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ವಿಶೇಷವಾದ ಸ್ಥಾನವಿದೆ. ಇಡೀ ಊರಿಗೂರೇ ಸಂಭ್ರಮಿಸೋ ವರ್ಷದ ಪ್ರಮುಖ ದಿನ ರಥೋತ್ಸವ ಆಚರಣೆಯ ದಿನ ಅಂದ್ರೆ ತಪ್ಪಾಗಲ್ಲ . ನೀವು ನಿಮ್ಮೂರು ಜಾತ್ರೆ, ರಥೋತ್ಸವಗಳಲ್ಲಿ ಪಾಲ್ಗೊಳ್ಳುವಂತೆ ನಾನಿಲ್ಲಿ ಪರಿಚಯಿಸಿ ಕೊಡುತ್ತಿರುವ ಪುಣ್ಯಸ್ಥಳದ ರಥೋತ್ಸವ ಸಂಭ್ರಮದಲ್ಲಿಯೂ ಒಮ್ಮೆಯಾದ್ರು ಪಾಲ್ಗೊಳ್ಳಿ.
ನೀವು ಈ ಚಿತ್ರದಲ್ಲಿ ಕಾಣ್ತಾ ಇರೋ ಬ್ರಹ್ಮರಥ ಎಲ್ಲಿಯದು ಅಂತ ಗೊತ್ತಾ…? ಇದು ನಮ್ಮ ಭಾರತದ ಅಂತ್ಯಂತ ಎತ್ತರದ ರಥಗಳಲ್ಲೊಂದು.
ಇದು ಕರ್ನಾಟಕ ಮತ್ತು ಕೇರಳ ಗಡಿ ಭಾಗದ ಮಂಜೇಶ್ವರದ ಶ್ರೀ ಮದನಂತೇಶ್ವರ ಸನ್ನಧಿಯಲ್ಲಿದೆ. ಇದರ ನಿರ್ಮಾಣಕ್ಕೆ ಬರೊಬ್ಬರಿ 34 ವರ್ಷಗಳು ಬೇಕಾಗಿತ್ತು…! ಎಚ್ ಎಚ್ ಶ್ರೀಮತ್ ವಿಭುದೇಂದ್ರ ತೀರ್ಥ ಸ್ವಾಮೀಜಿ ಈ ರಥದ ನಿರ್ಮಾಣದ ಸಂಪೂರ್ಣ ಜವಬ್ದಾರಿಯನ್ನು ಹೊತ್ತಿದ್ದರು.
ವಿಷ್ಣುಧರ್ಮೋತ್ತರ ಪುರಾಣ, ಗರುಡ ಪುರಾಣ, ಕಾಶಿಯಾ ಶಿಲ್ಪ ಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವ ಅಂಶಗಳ ಆಧಾರದಲ್ಲಿ ಈ ಬೃಹತ್ ರಥವನ್ನು ನಿರ್ಮಿಸಲಾಗಿದೆ. ರಥದಲ್ಲಿ 60-70 ಜನ ನಿಲ್ಲಬಹುದು. ಈ ದೈತ್ಯ ರಥವನ್ನು ನಿರ್ಮಿಸಿದ ಕುಶಲ ಕರ್ಮಿಗೆ ರಥದ ನಿರ್ಮಾಣದ ಕೆಲಸ ಮಾಡಿದ್ದಕ್ಕೆ ಯಾವ ಪ್ರತಿಫಲ ಬೇಕು ಕೇಳು ಎಂದಾಗ , ಆತ ತಾನು ಸಾವು ಬಯಸಿರೋದಾಗಿ ಹೇಳಿದ್ನಂತೆ..! ಈ ಪವಿತ್ರ ರಥದ ನಿರ್ಮಾಣದ ನಂತರ ಬೇರೆ ಮನೆಗಳ ಕೆಲಸ ಮಾಡಲು ಬಯಸಲ್ಲ ಅಂದಿದ್ದನಂತೆ.