ದುಡ್ಡಿನ ಹಿಂದೆ ಬಿದ್ದವನಿಗೆ ಪ್ರೀತಿ ಬದುಕಿನ ಪಾಠ ಹೇಳುವ ‘ಬಕಾಸುರ’….!

admin
1 Min Read

ಕರ್ವ ಖ್ಯಾತಿಯ ನಿರ್ದೇಶಕ ನವನೀತ್ ‘ಬಕಾಸುರ’ ಮೂಲಕ ದುಡ್ಡು ಮತ್ತು ಪ್ರೀತಿ , ಬಾಂಧವ್ಯದ ಸಂದೇಶವನ್ನು ಅಚ್ಚುಗಟ್ಟಾಗಿ ಕಟ್ಟಿಕೊಡವಲ್ಲಿ ಗೆದ್ದಿದ್ದಾರೆ.

ಜೀವನಕ್ಕೆ ದುಡ್ಡು ಬೇಕು….ಆದರೆ ದುಡ್ಡೇ ಜೀವನವಲ್ಲ ಎಂಬ ಸಾರ ಬಕಾಸುರದಲ್ಲಿದೆ‌.
ನಾಯಕ ಆರ್ಯ (ಆರ್ ಜೆ ರೋಹಿತ್) ದುಡ್ಡಿಗಾಗಿ ಏನ್ ಬೇಕಾದ್ರು ಮಾಡಲು ತಯಾರಿರುವ ವಕೀಲ‌. ತಪ್ಪಿಸ್ಥರನ್ನು ಶಿಕ್ಷೆಯಿಂದ ಪಾರುಮಾಡುವುದೇ ಕಾಯಕ.‌


ದುಡ್ಡಿನ ಹಿಂದೆ ಹೋದ ನಾಯಕನಿಗೆ ತಾಯಿ, ಪ್ರೇಯಸಿ ಯಾರೂ ಬೇಡ ಆಗ್ತಾರೆ. ದುಡ್ಡೇ ಮುಖ್ಯವಾಗಿರುತ್ತೆ.‌ ಹೆಣ್ಣಿನ ಬಾಳಿನಲ್ಲಿ ಆಟ ಆಡಿದ ವ್ಯಕ್ತಿಯ ಪರವಾಗಿ ವಾದ ಮಾಡ್ತಾನೆ…ದುಡ್ಡು ಪಡೀತಾನೆ. ಈ ಹಂತದಲ್ಲಿ ಉದ್ಯಮಿ ಚಕ್ರವರ್ತಿ (ರವಿಚಂದ್ರನ್ ) ಪರಿಚಯ ಆಗುತ್ತೆ. ಹಣದ ಹುಚ್ಚು ಹಿಡಿಸಿಕೊಂಡಿದ್ದ ಆರ್ಯನಿಗೆ ತನ್ನ ಕಂಪನಿಯ ಲೀಗಲ್ ಅಡ್ವೈಸರ್ ಆಗಿ ಸೇರಿಸಿಕೊಳ್ಳಲು ಕೆಲವೊಂದು ಟಾಸ್ಕ್ ಗಳನ್ನು ‌ಕೊಡ್ತಾರೆ.‌ ಆ ಟಾಸ್ಕ್ ಗಳನ್ನೆಲ್ಲಾ ಗೆದ್ದು ಹಣ ಪಡೀತಾನೆ.‌ ಆ ಟೈಮಲ್ಲಿ ಟೆರರಿಸ್ಟ್ ಒಬ್ಬನನ್ನು ರಕ್ಷಿಸೋ ಹೊಣೆ ಆರ್ಯನದ್ದಾಗುತ್ತೆ ಮುಂದೆ ಏನೆಲ್ಲಾ ಆಗುತ್ತೇ ಅನ್ನೋದನ್ನು ಚಿತ್ರಮಂದಿರದಲ್ಲಿ ನೋಡಿ…ಇಲ್ಲೇ ಹೇಳಿದ್ರೆ ಮಜಾ ಇರಲ್ಲ.
ಅಸಲಿಗೆ ಚಕ್ರವರ್ತಿ (ರವಿಚಂದ್ರನ್) ಆರ್ಯನಿಗೆ ಏನಾಗಬೇಕು…? ಆತ ಯಾಕಾಗಿ ಆರ್ಯನ ಬದುಕಿಗೆ ಎಂಟ್ರಿ‌ಕೊಡ್ತಾರೆ .. ಆರ್ಯ ಕೊನೆಯಲ್ಲಿ ಗಳಿಸಿಕೊಳ್ಳೋದೇನು ಅನ್ನೋದು ಸಸ್ಪೆನ್ಸ್.


ನಾಯಕಿ ಕಾವ್ಯಗೌಡ ಸಿಕ್ಕ ಅವಕಾಶದಲ್ಲಿ ತಮ್ಮೊಳಗಿನ ನಟನೆಯನ್ನು ಹೊರಹಾಕುವಲ್ಲಿ ಗೆದ್ದಿದ್ದಾರೆ. ಸಾಧುಕೋಕಿಲ ಮಾಮೂಲಿಯಂತೆ ನಗಿಸುತ್ತಾರೆ. ಶಶಿಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಷ್ಟೇ. ರಘುಭಟ್ ನೆಗಿಟೀವ್ ಶೇಡ್ ನಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

Share This Article
Leave a Comment