ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಟೆಕ್ಕಿ ಕುಟುಂಬ
ಹಾವೇರಿ: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಲವು ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯರು ಆತಂಕದಲ್ಲಿ ದಿನಕಳೆಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಂತೆ, ಹಾವೇರಿ ಜಿಲ್ಲೆಯ ಕುಟುಂಬವೊಂದು ಅಬುಧಾಬಿನಲ್ಲಿ ಸಿಲುಕಿಕೊಂಡಿದೆ.
ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಅವರು ಕುಟುಂಬ ಸಮೇತ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನೆಲೆಸಿದ್ದು, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಅಬುಧಾಬಿಯಲ್ಲಿ ಸದ್ಯ ಕುಟುಂಬದೊಂದಿಗೆ ಇರುವ ರಾಘವೇಂದ್ರ ಕುದುರಿ ಮಾತನಾಡಿ, “ಸ್ನಾನಗೃಹದ ಮೇಲ್ಛಾವಣಿ ಕುಸಿದು ಬಿದ್ದಿದೆ. ಬಾಗಿಲುಗಳು ವೇಗವಾಗಿ ಅಲುಗಾಡುತ್ತಿವೆ. ಇಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ನಮಗೆ ತುಂಬಾ ಭಯವಾಗುತ್ತಿದೆ. ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಅವರು ಮುಂದುವರಿದು, “ಮೊದಲು ನಾನೊಬ್ಬನೇ ಇಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ತಿಂಗಳ ಹಿಂದಷ್ಟೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಆದರೆ ಈಗ ಪರಿಸ್ಥಿತಿ ಗಂಭೀರವಾಗಿದೆ. ನಮ್ಮಿರುವ ಕಟ್ಟಡದ ಸಮೀಪ ಕ್ಷಿಪಣಿ ದಾಳಿ ನಡೆದ ದೃಶ್ಯಗಳನ್ನು ನೋಡಿ ಕೆಲವು ಕ್ಷಣಗಳು ಬೆಚ್ಚಿಬಿದ್ದಿದ್ದೇವೆ” ಎಂದು ವಿವರಿಸಿದ್ದಾರೆ.
ಯುದ್ಧದ ಉದ್ವಿಗ್ನತೆಯ ನಡುವೆಯೇ ಅಲ್ಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ದಿನಕಳೆಯುತ್ತಿದ್ದಾರೆ. ಹಾವೇರಿ ಮೂಲದ ಈ ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ತರಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯರಿಂದಲೂ ವ್ಯಕ್ತವಾಗುತ್ತಿದೆ.






