IPL ಬೆಟ್ಟಿಂಗ್ ಆಡೋರ ಬಗ್ಗೆ ಕರಿಯಪ್ಪ ಟೀಮ್ ಸಿನಿಮಾ

admin
2 Min Read

2019ರಲ್ಲಿ ‘ಕೆಮಿಸ್ಟ್ರೀ ಆಫ್‌ ಕರಿಯಪ್ಪ’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಕಂಡವರು ನಿರ್ದೇಶಕ ಕುಮಾರ್. ಮೊದಲ ಯತ್ನದಲ್ಲೇ, ಕಡಿಮೆ ಬಜೆಟ್ ಇಟ್ಟುಕೊಂಡು, ಒಂದು ಭರ್ಜರಿ ಮನರಂಜನೆ ಇರುವ ಸಿನಿಮಾ ನೀಡಿದ್ದರು ಅವರು. ಅಲ್ಲಿ ಕರಿಯಪ್ಪ ಪಾತ್ರದಲ್ಲಿ ತಬಲಾ ನಾಣಿ ಸಖತ್ ರಂಜಿಸಿದ್ದರು. ಇದೀಗ ಅದೇ ತಂಡ ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮಾಡಿದೆ. ಈ ಬಾರಿ ಸಾಮಾಜಿಕ ಕಳಕಳಿಯುಳ್ಳ ವಿಷಯವೊಂದನ್ನು ಹಾಸ್ಯದ ಜೊತೆಗೆ ಹೇಳುವ ಪ್ರಯತ್ನವನ್ನು ಈ ತಂಡ ಮಾಡಿದೆ. ಈಚೆಗೆ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ.

ಟ್ರೇಲರ್‌ನಲ್ಲಿ ಒಂದು ಡೈಲಾಗ್ ಇದೆ. ‘ಕ್ರಿಕೆಟ್ ಅನ್ನೋದು ಈಗ ಬರೀ ಆಟ ಆಗಿ ಉಳ್ಕೊಂಡಿಲ್ಲ’ ಅಂತ. ಒಂದು ಕಾಲದಲ್ಲಿ ಕ್ರಿಕೆಟ್ ಆಟವು ಮನರಂಜನೆ ಕೊಡುತ್ತದೆಂದು ಹೇಳುತ್ತಿದ್ದರು. ಕಾಲ ಬದಲಾದಂತೆ ಇದು ವ್ಯಾಪಾರ ಎನ್ನುವಂತೆ ಆಗಿದೆ. ಅದರಲ್ಲೂ ಐಪಿಎಲ್ ಟೈಮ್‌ನಲ್ಲಿ ಬೆಟ್ಟಿಂಗ್‌ನಿಂದಾಗಿ ಹಲವು ಕುಟುಂಬಗಳು ಕಷ್ಟದ ಸುಳಿಗೆ ಸಿಲುಕುವುದನ್ನು ನೋಡಿದ್ದೇವೆ. ಇಂಥದ್ದೇ ಒಂದಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮಾಡಿದ್ದಾರೆ ಕುಮಾರ್.

‘ಪ್ರತಿ ವರ್ಷ ಬೆಟ್ಟಿಂಗ್‍ನಿಂದ ಸೋತು ಸುಮಾರು 200 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಶೇ.70ರಷ್ಟು ಜನರ ಬದುಕು ಸಾಲದ ಸುಳಿಯಲ್ಲಿ ಸಿಲುಕಿದೆ. ನಾಲ್ಕು ವಿಭಾಗಗಳಲ್ಲಿ ಕಥೆಯು ಸಾಗಲಿದ್ದು, ಒಂದಕ್ಕೊಂದು ಸಂಬಂಧ ಇರುತ್ತದೆ. ಇದಕ್ಕೆ ಪೂರಕವಾಗುವಂತೆ ಬೆಂಗಳೂರು, ಮಂಗಳೂರು, ಮಂಡ್ಯ ಮತ್ತು ಬೆಳಗಾವಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹ್ಯೂಮರಸ್ ಹಾಗೂ ಎಮೋಷನ್ಸ್ ಜಾಸ್ತಿ ಇದ್ದು, ಕ್ಲೈಮಾಕ್ಸ್ ನೋಡುಗನಿಗೆ ತುಂಬ ಕಾಡುತ್ತದೆ. ಬೆಟ್ಟಿಂಗ್ ಆಡುವುದು ಎಷ್ಟು ತಪ್ಪು ಅನ್ನೋದು ತಿಳಿಯುತ್ತದೆ’ ಎಂದು ನಿರ್ದೇಶಕ ಕುಮಾರ್ ಹೇಳುತ್ತಾರೆ.

ಈ ಹಿಂದೆ ‘..ಕರಿಯಪ್ಪ’ ಚಿತ್ರದಲ್ಲೂ ವಕೀಲನಾಗಿ ಮಿಂಚಿದ್ದ ತಬಲಾ ನಾಣಿ, ಇಲ್ಲಿಯೂ ವಕೀಲನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದಿಂದ ನನಗೆ ಕಾರ್ಡ್ ನವೀಕರಣವಾದಂತೆ, ಎಂಟು ಚಿತ್ರಗಳಲ್ಲಿ ಅವಕಾಶ ದೊರಕಿತು. ಒಂದು ವಿಷಯ, ತಂಡ ಗೆದ್ದರೆ ಅಷ್ಟು ಜನರಿಗೆ ಅನುಕೂಲವಾಗುತ್ತದೆ. ಯಾರಲ್ಲೂ ಧೋರಣೆ ಗುಣ ಇಲ್ಲ. ಅದರಿಂದಲೇ ಉತ್ತಮ ಚಿತ್ರ ಕೊಡಲು ಸಾಧ್ಯವಾಯಿತು. ದಯವಿಟ್ಟು ತಂಡವನ್ನು ಹಾಳು ಮಾಡಿಕೋಬೇಡಿ. ಗುಂಪು ಚೆನ್ನಾಗಿದ್ದರೆ ತಂಪು ಕೊಡುತ್ತದೆ. ನೋಡಿದವರು ಖುಷಿ ಪಡ್ತಾರೆ. ಕಷ್ಟಗಳು ಪಾಠ ಕಲಿಸುತ್ತದೆ’ ಎನ್ನುತ್ತಾರೆ ಅವರು.

ಅರುಣಾ ಬಾಲರಾಜ್, ಗುರುರಾಜ ಹೊಸಕೋಟೆ, ತರಂಗ ವಿಶ್ವ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅಪೂರ್ವಾ ಭಾರದ್ವಾಜ್, ದೀಪಾ ಜಗದೀಶ್, ‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಪುಟ್ಟರಾಜು ಹಾಗೂ ಮಹೇಂದ್ರ ಪ್ರಸಾದ್, ಯಶಸ್ ಅಭಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಮೂರು ಹಾಡುಗಳಿಗೆ ವೀರ್‌ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಾಹಕರಾಗಿ ಶಿವ ಸೇನ ಕೆಲಸ ಮಾಡಿದ್ದಾರೆ. ಏಪ್ರಿಲ್ ತಿಂಗಳ ಕೊನೇ ವಾರದಂದು ತೆರೆಗೆ ಬರುವ ಸಾಧ್ಯತೆ ಇದೆ.

Share This Article
Leave a Comment