ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡರ ಯುಗಾರಂಭ…!?

Date:

ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಇನ್ನೆರಡು ದಿನದಲ್ಲಿ (ಮೇ 12) ಚುನಾವಣೆ…! ಇನ್ನು ಐದೇ ಐದು ದಿನಕ್ಕೆ (ಮೇ 15) ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ಯದ ಪ್ರಮುಖ ವಿಧಾನ ಸಭಾ ಕ್ಷೇತ್ರಗಳಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವೂ ಒಂದು. ಬುದ್ಧಿವಂತ ಮತದಾರರನ್ನೊಳಗೊಂಡ ಕ್ಷೇತ್ರವಿದು. ಇಲ್ಲಿ ಜನ ಬೆಲೆ ಕೊಡೋದು ವ್ಯಕ್ತಿ ಹಾಗೂ ವ್ಯಕ್ತಿತ್ವಕ್ಕೆ. ಕಳೆದ 5 ಬಾರಿ( 3 ಬಾರಿ ಬಿಜೆಪಿ 2 ಬಾರಿ ಕಾಂಗ್ರೆಸ್) ಅಂದರೆ 25 ವರ್ಷಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರನ್ನು ನೋಡಿರುವ ಮತದಾರರು ಈ ಬಾರಿ ಬದಲಾವಣೆಗೆ ಮುಖ‌ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಶಾಸಕರು ಮಾಡಿದ್ದು ಅಷ್ಟೇ ಇದೆ…ಈ ಸಲ ಪ್ರಾದೇಶಿಕ ಪಕ್ಷ ಜೆಡಿಎಸ್ ಗೇಕೆ ಮತ ನೀಡಬಾರದು ಎಂದು ಮತದಾರರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದಾರೆ. ಜೊತೆಗೆ ಸ್ವಯಂ ಪ್ರೇರಿತರಾಗಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ…!


ಹೌದು,‌ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿರುವ ಆರ್ ಎಂ ಮಂಜುನಾಥ ಗೌಡರು ಗೆಲ್ಲುವುದು ಬಹುತೇಕ ಖಚಿತ.
ಮಾಜಿ ಸಚಿವ ,‌ ಹಾಲಿ ಶಾಸಕ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಅವರಿಗೆ ಹಾಗೂ ಮಾಜಿ ಶಾಸಕ ಬಿಜೆಪಿಯ ಆರಗ‌ ಜ್ಞಾನೇಂದ್ರ ಅವರಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಮತ ನೀಡಿದವರೇ ಹೇಳುತ್ತಿದ್ದಾರೆ.
1983, 1985 , 1989ರಲ್ಲಿ ನಡೆದ ಚುನಾವಣೆಯಲ್ಲಿ ಸತತ ಸೋಲುಕಂಡಿದ್ದ ಆರಗ ಜ್ಞಾನೇಂದ್ರ ಅವರು 1994 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಸೋಲುಗಳ ಅನುಕಂಪದ ಅಲೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಜನ ಭರವಸೆ ಇಟ್ಟು 1999 ಮತ್ತು 2004ರ ಚುನಾವಣೆಯಲ್ಲೂ ಜ್ಞಾನೇಂದ್ರ ಅವರಿಗೆ ವಿಜಯಮಾಲೆ ಹಾಕಿದರು. ಹ್ಯಾಟ್ರಿಕ್ ಗೆಲುವು ಪಡೆದ ಇವರು ಮೂರು ಅವಧಿಯಲ್ಲಿ , 15 ವರ್ಷಗಳ ಕಾಲ ಶಾಸಕರಾಗಿದ್ದರೂ ಹೇಳಿಕೊಳ್ಳುವಂತಹ ಕೆಲಸ ಏನೂ ಮಾಡಲಿಲ್ಲ.‌
ಆಗ ಮತದಾರರ ಕೈ ಹಿಡಿದಿದ್ದು ಕಿಮ್ಮನೆ ರತ್ನಾಕರ್ ಅವರನ್ನು. ಇವರು ಸಹ ಹಿಂದೆ ಸಾಲು ಸಾಲು ಸೋಲನುಭವಿಸಿದ್ದರಿಂದ ಮತದಾರ, ‘ ಜ್ಞಾನೇಂದ್ರ ಅವರಂತೂ ಕೆಲಸ ಮಾಡಿಲ್ಲ. ಇವರಿಗೆ ಅಧಿಕಾರ ಕೊಟ್ಟಿದ್ದು ಸಾಕು, ಕಿಮ್ಮನೆಗೆ ಕೊಟ್ಟು ನೋಡೋಣ ಅಂತ 2009ರಲ್ಲಿ ಮೊದಲ ಬಾರಿಗೆ ಕಿಮ್ಮನೆಗೆ ಆಶೀರ್ವಾದ ಮಾಡಿದರು.
ಬಳಿಕ 2013 ರಲ್ಲಿ ಇದೇ ಕಿಮ್ಮನೆಗೆ ಮತ್ತೊಂದು ಅವಕಾಶವನ್ನೂ ನೀಡಿದ್ರು. ಕಿಮ್ಮನೆ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಸಚಿವರೂ ಆದರು…!


ಜ್ಞಾನೇಂದ್ರ ಅವರಿಗೆ ಹೋಲಿಸಿದರೆ ಕಿಮ್ಮನೆ ಒಂದಿಷ್ಟು ಕೆಲಸಗಳನ್ನು ಮಾಡಿಸಿದ್ದಾರೆ. ಇವುಗಳು ಕಣ್ಣಿಗೆ ಕಾಣುತ್ತವೆ . ಆ ಬಗ್ಗೆ ಯಾರೂ ಚಕಾರ ಎತ್ತುವಂತಿಲ್ಲ. ಆದರೆ, ಇವರಿಗೆ ಕೊಟ್ಟ ಅಧಿಕಾರ ಸಾಕು, ಅವರಿಗಿಂತ ಕೆಲಸ ಮಾಡಿಸಬಲ್ಲ, ಜನರಿಗೆ 24 ಗಂಟೆಯೂ ಸಿಗಬಲ್ಲ ಜನ ನೇತಾರ ಬಂದಿದ್ದಾರೆ. ಅವರೇ ಆರ್ ಎಂ ಮಂಜುನಾಥ ಗೌಡರು.

ಯಸ್, ಜ್ಞಾನೇಂದ್ರ ಮತ್ತು ಕಿಮ್ಮನೆ ಎದುರು ಮಂಜುನಾಥ್ ಗೌಡರ ಜನಪ್ರಿಯತೆ ಹೆಚ್ಚಿದೆ. ‌ಅಧಿಕಾರದಲ್ಲಿರದೇ ಇದ್ದರೂ ಜನಸೇವೆಯ ಮೂಲಕ, ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ತೀರ್ಥಹಳ್ಳಿ ಕ್ಷೇತ್ರ ವ್ಯಾಪಿ ಮಾತ್ರವಲ್ಲದೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಇವರು ಪೊಳ್ಳು ಆಶ್ವಾಸನೆ ನೀಡುವವರಲ್ಲ. ಅಹಂಕಾರ, ಹಣ, ಅಧಿಕಾರದ ಮದ ಇವರಿಗಿಲ್ಲ. ನಂಬಿದವರನ್ನೂ ಎಂದೂ ಕೈಬಿಡದ ನೇತಾರ.
ಡಿಸಿಸಿ ಬ್ಯಾಂಕ್ ನ ಹಗರಣವೊಂದನ್ನು ಇವರ ತಲೆಗೆ ಸುತ್ತಿ, ಇವರ ರಾಜಕೀಯ ಭವಿಷ್ಯ ಮುಗಿಸುವ ಯೋಜನೆ ರೂಪಿಸಿದ್ದ ವಿರೋಧಿಗಳಿಗೆ ನ್ಯಾಯಮಾರ್ಗದಲ್ಲೇ ಸರಿಯಾದ ಉತ್ತರ ಕೊಟ್ಟವರು. ಆರೋಪಗಳಿಗೆ ಅಂಜದೆ ಇವರನ್ನು ಉಳಿಸಿದ್ದು ಪ್ರಾಮಾಣಿಕತೆ..!
ಸಹಕಾರಿ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಂಜುನಾಥ ಗೌಡರು, ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಛಲವಾದಿ, ಹೋರಾಟಗಾರರು.


ತುಂಗಾ ನದಿಯ ಮಿನಿ ವಿದ್ಯುತ್ ಯೋಜನೆಯ ವಿರುದ್ಧ ಹೋರಾಟ, ಮಹಿಳೆಯರ ನೆಮ್ಮದಿ ಕೆಡಿಸಿದ್ದ ಒಂದಂಕಿ ಲಾಟರಿ ಮುಟ್ಟುಗೋಲು ಹಾಕುವಂತೆ ಹೋರಾಟ, ಅಡಿಕೆಗೆ ಬೆಂಬಲ ಬೆಲೆ ನೀಡುವಂತೆ ನಡೆಸಿದ ಹೋರಾಟ ಸೇರಿದಂತೆ ಇವರು ನಡೆಸಿದ ಹೋರಾಟಗಳನ್ನು ತೀರ್ಥಹಳ್ಳಿ ಜನ ಮರೆತಿಲ್ಲ.
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರೂ…..ಅಧಿಕಾರ ಇಲ್ಲ ಅಂತ ಸುಮ್ನೆ ಐದು ವರ್ಷ ಕಾಲ ಕಳೆದು ಇಂದು ಚುನಾವಣಾ ಕಣಕ್ಕೆ ಇಳಿದವರಲ್ಲ ಗೌಡರು.


ಅಧಿಕಾರ ಇಲ್ಲದೇ ಇದ್ದರೂ ತಮ್ಮ ಕೈಲಾದ ಮಟ್ಟಿಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಸಹೃದಯಿ ನೇತಾರರು. ಈ ಬಾರಿ ಜೆಡಿಎಸ್ ನಿಂದ ಅಖಾಡಕ್ಕೆ ಇಳಿದಿದ್ದಾರೆ.
ಜ್ಞಾನೇಂದ್ರ , ಕಿಮ್ಮನೆ ಸಾಕಪ್ಪ ಸಾಕು ಗೌಡರು ಬಂದಿದ್ದಾರೆ ಇವರನ್ನು ಆಯ್ಕೆ ಮಾಡೋಣ ಎಂದು ಮತದಾರರು ಮಾತಾಡಿಕೊಳ್ಳುತ್ತಿದ್ದಾರೆ. ಕಾದು ನೋಡೋಣ‌ ಮಂಜುನಾಥ್ ಗೌಡರ ಯುಗಾರಂಭ ಆಗುತ್ತಾ ಅಂತ….!?

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...