ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮುರಿದ ಪರಿಣಾಮ ರಥ ಉರುಳಿ ಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಅವಘದದಲ್ಲಿ ಯಾವುದೇ ಅಪಾಯವಾಗಿಲ್ಲ. ದೇವಾಲಯದ ಹೊರ ಆವರಣದಲ್ಲಿ ರಥೋತ್ಸವ ಆರಂಭವಾಗಿತ್ತು. ರಥ ಸಾಗಿ ದೇವಾಲಯದ ಗರ್ಭ ಗುಡಿಯ ಹಿಂಭಾಗ ಬಂದಾಗ ಚಕ್ರದ ದೂರಿ ಹಾಗೂ ಬಲಗಡೆಯ ಚಕ್ರ ಮುರಿದು ರಥ ವಾಲಿಕೊಂಡಿತು.
ಇದೇ ವೇಳೆ ಪೊಲೀಸರು ರಥದ ಅಕ್ಕಪಕ್ಕ ಇದ್ದ ನೂರಾರು ಜನರನ್ನು ಚದುರಿಸಿದ್ರು. ರಥದ ಗೋಪುರವನ್ನು ಹಗ್ಗದ ಸಹಾಯದಿಂದ ಹಿಡಿದುಕೊಳ್ಳಲಾಗಿತ್ತು. ಹಗ್ಗದ ಆಧಾರದಿಂದ ನಿಂತಿದ್ದ ರಥ, ಹಗ್ಗವನ್ನು ನಿಧಾನವಾಗಿ ಸಡಿಲ ಬಿಟ್ಟಾಗ ರಥ ಕೆಳಕ್ಕೆ ಉರುಳಿತು. ಪೊಲೀಸರು ಜನರನ್ನು ದೂರ ಚದುರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ. ಇನ್ನು ರಥೋತ್ಸವ ಅಪೂರ್ಣಗೊಂಡರೂ ಬೆಳ್ಳಿ ಕವಚ ಧಾರಣೆ ಮಾಡಲಾಯಿತು. ಇನ್ನು ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ರು. ಇದಕ್ಕೂ ಮೊದಲು ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಇನ್ನು ಒಂದೆರಡು ತಿಂಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ದೇವಾಲಯದ ರಥೋತ್ಸವದ ಸಂದರ್ಭದಲ್ಲೂ ರಥ ವೇಗವಾಗಿ ಚಲಿಸಿ ಅವಘಡ ಸಂಭವಿಸಿತ್ತು.