ಟಿ20 ಸರಣಿಯಲ್ಲಿ ಹೀನಾಯ ವೈಫಲ್ಯ ಅನುಭವಿಸಿದ್ದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್, ಇಂಗ್ಲೆಂಡ್ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿ ಫಾರ್ಮ್ಗೆ ಮರಳಿದ್ದರು.
ಇಂಗ್ಲೆಂಡ್ ವಿರುದ್ಧ ಕಳೆದ ಟಿ20 ಸರಣಿಯಲ್ಲಿ ಆಡಿದ್ದ ನಾಲ್ಕು ಪಂದ್ಯಗಳಿಂದ ರಾಹುಲ್ ಗಳಿಸಿದ್ದು ಕೇವಲ 15 ರನ್ ಮಾತ್ರ. ಈ ಹಿನ್ನೆಲೆಯಲ್ಲಿ ಅವರು ಮಾನಸಿಕವಾಗಿ ಕುಗ್ಗಿದ್ದರು. ರಾಹುಲ್ ವೈಫಲ್ಯದ ಹೊರತಾಗಿಯೂ ಭಾರತ ತಂಡ 3-2 ಅಂತರದಲ್ಲಿ ಟಿ20 ಸರಣಿಯನ್ನು ಮುಡಿಗೇರಿಸಿಕೊಂಡಿತ್ತು.
ವೈಫಲ್ಯದ ನಡುವೆಯೂ ರಿಷಭ್ ಪಂತ್ ಸ್ಥಾನದಲ್ಲಿ ಓಡಿಐ ಸರಣಿಯ ಆರಂಭಿಕ ಪಂದ್ಯಕ್ಕೆ ಅವಕಾಶ ಗಿಟ್ಟಿಸಿಕೊಂಡ ರಾಹುಲ್ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಿತ್ತು. ಅದರಂತೆ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ 300ಕ್ಕೂ ಹೆಚ್ಚಿನ ರನ್ ಕಲೆಹಾಕಲು ನೆರವಾಗಿದ್ದರು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಣದಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಓಡಿಐ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್ ರಾಹುಲ್, ಟಿ20 ಸರಣಿಯಲ್ಲಿ ಅನುಭವಿಸಿ ವೈಫಲ್ಯ ನನ್ನ ವಿಶ್ವಾಸದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿಕೊಂಡರು.
“ಇದು ಎಂದಿಗೂ ಆತ್ಮವಿಶ್ವಾಸ ಮತ್ತು ಆತ್ಮ ನಂಬಿಕೆಯ ವಿಷಯವಾಗಿರಲಿಲ್ಲ. ಇದು ಕ್ರೀಡೆಯಾಗಿರುವುದರಿಂದ ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಕೆಲವೊಮ್ಮೆ ಇದು ನಿಮ್ಮ ಹಾದಿಯಲ್ಲಿ ಇರುವುದಿಲ್ಲ. ಆಗ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಪ್ರಯತ್ನಿಸಬೇಕು. ಅದರಂತೆ ಇದನ್ನು ನಾನು ಮಾಡಿ ಮುಗಿಸಿದ್ದೇನೆ. ನೆಟ್ಸ್ನಲ್ಲಿ ಹಾಗೂ ಅಭ್ಯಾಸದಲ್ಲಿ ನನ್ನ ಬ್ಯಾಟಿಂಗ್ ಚೆನ್ನಾಗಿ ಬರುತ್ತಿತ್ತು. ಹಾಗಾಗಿ ಈ ಬಗ್ಗೆ ನನ್ನಲ್ಲಿ ವಿಶ್ವಾಸವಿತ್ತು,” ಎಂದು ಹೇಳಿದರು.