ಮೊಹಮ್ಮದ್ ಸಿರಾಜ್.. ಈ ಬೌಲರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮೊದಲಿಗೆ ಐಪಿಎಲ್ ಆಡಿದಾಗ ಪ್ರಶಂಸೆಗಿಂತ ಟೀಕೆ ಪಡೆದುಕೊಂಡಿದ್ದೇ ಹೆಚ್ಚು. ಕಳಪೆ ಪ್ರದರ್ಶನ ನೀಡುತ್ತಿದ್ದ ಸಿರಾಜ್ ಹೆಚ್ಚಿನ ರನ್ ಹೊಡೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್ ಗೆ ತುತ್ತಾಗಿದ್ದರು. ಈತನಿಗೆ ಅವಕಾಶವನ್ನಾದರೂ ಹೇಗೆ ಕೊಡುತ್ತಾರೆ? ಅಸಲಿಗೆ ಈತ ನಿಜವಾಗಿಯೂ ಬೌಲರ್ರಾ ಅಥವಾ ಏನು? ಎಂದೆಲ್ಲ ತೀರಾ ಕೆಳಮಟ್ಟದಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರತಿಭೆಯನ್ನು ಕೆಣಕಿದ್ದರು.
ಆದರೆ ಸಿರಾಜ್ ಅವರ ಬಗ್ಗೆ ಯಾರು ಏನೇ ಮಾತನಾಡಿದರೂ ನಾನು ನಿನ್ನ ಜೊತೆ ಇದ್ದೇನೆ ಎಂದು ಬೆನ್ನು ತಟ್ಟಿ ಹಿಂದೆ ನಿಂತದ್ದು ಕಿಂಗ್ ವಿರಾಟ್ ಕೊಹ್ಲಿ. ವಿರಾಟ್ ಬೆಂಬಲದೊಂದಿಗೆ ತನ್ನ ಪ್ರಯತ್ನವನ್ನು ಮುಂದುವರೆಸಿದೆ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದರು. ಪ್ರಮುಖ ವಿಕೆಟ್ ಗಳನ್ನು ಪಡೆದು ಕೊಳ್ಳುವುದರ ಮೂಲಕ ತಮ್ಮನ್ನು ಟ್ರೋಲ್ ಮಾಡಿದವರಿಗೆ ಬೌಲಿಂಗ್ ಮೂಲಕ ಉತ್ತರ ನೀಡಿದರು.
ಇದೀಗ ಸದ್ಯಕ್ಕೆ ನಡೆಯುತ್ತಿರುವ ಐಪಿಎಲ್ ಟೂರ್ನಿ ಯಲ್ಲಿಯೂ ಸಹ ಸ್ಥಿರ ಉತ್ತಮ ಬೌಲಿಂಗ್ ಮಾಡುತ್ತಿದ್ದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಗಳಲ್ಲಿ ಆ್ಯಂಡ್ರೆ ರಸೆಲ್ ಹಿಗ್ಗಾಮುಗ್ಗಾ ಬಾರಿಸುತ್ತಿದ್ದ ವೇಳೆ 19ನೇ ಓವರನ್ನು ವಿರಾಟ್ ಮೊಹಮ್ಮದ್ ಸಿರಾಜ್ ಗೆ ನೀಡಿದರು. ಸಿರಾಜ್ ಗೆ ಓವರ್ ನೀಡಿದ ಕೂಡಲೇ ಹಲವಾರು ಮಂದಿ ಪಕ್ಕಾ ರನ್ ಹೊಡೆಸಿಕೊಳ್ಳುತ್ತಾರೆ ಎಂದೇ ಭಾವಿಸಿದ್ದರು. ಆದರೆ ಸಿರಾಜ್ ಮಾಡಿದ್ದೇ ಬೇರೆ ಆ ಓವರ್ ನಲ್ಲಿ ಸಿರಾಜ್ ಕೊಟ್ಟದ್ದು ಕೇವಲ ಒಂದೇ ಒಂದು ರನ್. 19ನೇ ಓವರ್ ನಲ್ಲಿ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಗೆ 5 ಡಾಟ್ ಬಾಲ್ ಹಾಕಿದ ಮೊಹಮ್ಮದ್ ಸಿರಾಜ್ ಆರ್ ಸಿಬಿ ಕೈಗೆ ಪಂದ್ಯವನ್ನ ತಂದರು.
ಮೊಹಮ್ಮದ್ ಸಿರಾಜ್ ಮಾಡಿದ ಈ ಅದ್ಬುತ ಓವರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕೊಂಡಾಡತೊಡಗಿದ್ದಾರೆ. ಅಂದು ಇವನ್ಯಾವ ಸೀಮೆ ಬೌಲರ್ ಗುರು ಎಂದವರು ಇಂದು ಅಬ್ಬಬ್ಬಾ ಮೊಹಮ್ಮದ್ ಸಿರಾಜ್ ಒನ್ ಆಫ್ ದಿ ಬೆಸ್ಟ್ ಬೌಲರ್ ಎನ್ನುತ್ತಿದ್ದಾರೆ.