ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ವಿವಿಧ ದೇಶಗಳಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ಸಿಲುಕಿರುವ ತನ್ನ ನಾಡಿನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಸರ್ಕಾರಗಳು ಪ್ರಯತ್ನವನ್ನು ನಡೆಸುತ್ತಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿವಿಧ ದೇಶಗಳ ಸಾವಿರಾರು ಜನರು ವಿಮಾನಕ್ಕಾಗಿ ಕಾಯುತ್ತಿದ್ದಾರೆ.

ಭಾನುವಾರವೇ ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ ವಶಕ್ಕೆ ಪಡೆದುಕೊಂಡಿದ್ದಾರೆ. 126 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ಕಾಬೂಲ್ನಿಂದ ನವದೆಹಲಿಗೆ ಬಂದಿದೆ. ಈಗ ಅಫ್ಘಾನಿಸ್ತಾನಕ್ಕೆ ವಿಮಾನ ಹಾರಾಟವನ್ನು ನಡೆಸಲು ವಿವಿಧ ದೇಶಗಳು ಸಿದ್ಧವಿಲ್ಲ. ಅಫ್ಘಾನಿಸ್ತಾನದಲ್ಲಿ ಸುಮಾರು 200 ಜನ ಭಾರತೀಯರು ಇನ್ನೂ ಇದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇವರಲ್ಲಿ ವಿದೇಶಾಂಗ ಇಲಾಖೆಯ ಉದ್ಯೋಗಿಗಳು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿಗಳು ಸಹ ಸೇರಿದ್ದಾರೆ. ಎಲ್ಲರೂ ಕಾಬೂಲ್ನಲ್ಲಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನವಿದೆ. ಆದರೆ ಕಾಬೂಲ್ನ ಇಂಡಿಯನ್ ಮಿಷನ್ ಕಾಪೌಂಡ್ನಲ್ಲಿರುವ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದು ಹೇಗೆ? ಎಂಬುದ ಸದ್ಯದ ಪ್ರಶ್ನೆಯಾಗಿದೆ. ತಾಲಿಬಾನಿಗಳು ನಗರದಲ್ಲಿ ಕರ್ಫ್ಯೂ ಹೇರಿದ್ದಾರೆ. ಕಾಬೂಲ್ನಲ್ಲಿ ಸಿಲುಕಿರುವ ಜನರಲ್ಲಿ 100 ಜನರು ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸೇರಿದಂತೆ ವಿವಿಧ ಕಡೆ ಭದ್ರತೆಗಾಗಿ ಇವರು ನಿಯೋಜನೆಗೊಂಡಿದ್ದರು. ಭಾನುವಾರ ರಾತ್ರಿಯಿಂದ ಅಫ್ಘಾನಿಸ್ತಾನದಲ್ಲಿ ವಾಣಿಜ್ಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.