ನಟಿ ವಿಜಯಲಕ್ಷ್ಮಿ ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ತಮಗೆ ಕೋವಿಡ್ ಆಗಿದೆ, ಐಸೋಲೇಷನ್ ಆಗಬೇಕು ಅಭಿಮಾನಿಗಳು ಯಾರಾದರೂ ನಮಗೆ ಮನೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ವಿಡಿಯೋ ನೋಡಿದ ಹೊನ್ನಾವರದ ಯುವತಿಯೊಬ್ಬರು ವಿಜಯಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಅವರ ಅಕ್ಕನನ್ನು ದಾಖಲಿಸಿದ್ದ ಆಸ್ಪತ್ರೆಯ ಬಿಲ್ ಅನ್ನೆಲ್ಲ ಭರಿಸಿ ಅವರನ್ನು ಕಾರಿನಲ್ಲಿ ಹೊನ್ನಾವರದ ಬಳಿಕ ಕರ್ಕಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ತಮ್ಮ ತಂದೆ, ಗ್ರಾಮ ಪಂಚಾಯಿತಿ ಸದಸ್ಯ ತುಕಾರಾಂ ನಾಯಕ್ ನೆರವಿನೊಟ್ಟಿಗೆ ಬಾಡಿಗೆ ಮನೆಯೊಂದನ್ನು ನೋಡಿ ಅದರಲ್ಲಿ ವಿಜಯಲಕ್ಷ್ಮಿ , ಅವರ ಅಕ್ಕ ಹಾಗೂ ತಾಯಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಕುಟುಂಬದ ಊಟದ ವ್ಯವಸ್ಥೆಯನ್ನು ತುಕಾರಾಂ ನಾಯಕ್ ಕುಟುಂಬದವರೇ ನೋಡಿಕೊಂಡಿದ್ದಾರೆ.
ಆ ಬಾಡಿಗೆ ಮನೆಯಲ್ಲಿ ಐದು ದಿನ ಇದ್ದ ವಿಜಯಲಕ್ಷ್ಮಿ ಮನೆಯ ಬಗ್ಗೆ ತಕರಾರು ತೆಗೆದಿದ್ದು, ಮನೆಯಲ್ಲಿ ಹಲ್ಲಿ ಇದೆ, ಜಿರಳೆ ಇದೆ ಎಂದು ಹೇಳಿ ಆ ಮನೆ ಬಿಟ್ಟು ಹೋಗಿದ್ದಾರೆ. ಎಲ್ಲಿಗೆ ಹೋಗುತ್ತೀರೆಂದು ಕೇಳಿದ್ದಕ್ಕೆ ತಾವು ವಿಜಯನಗರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ವಿಜಯಲಕ್ಷ್ಮಿ ಕುಟುಂಬಕ್ಕೆ ತುಕಾರಾಂ ಅವರೇ ಬಾಡಿಗೆ ಕಾರು ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಒಂದನ್ನು ಮಾಡಿ ಮಾಹಿತಿ ನೀಡಿದ್ದಾರೆ ತುಕಾರಾಂ. ಮನೆಯಿಂದ ಹೋಗುವ ಮುನ್ನಾ ತುಕಾರಾಂ ಅವರೊಟ್ಟಿಗೆ ಜಗಳವೂ ಆಡಿದ್ದಾರೆ ವಿಜಯಲಕ್ಷ್ಮಿ ಎನ್ನಲಾಗಿದೆ. ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಮನೆ ಸರಿಯಾಗಿಲ್ಲ ಎಂದೆಲ್ಲ ಹೇಳಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಕನ್ನಡಿಗರು ನನಗೆ ನೋಡಿ ಎಂಥಹಾ ಮನೆ ಕೊಟ್ಟಿದ್ದಾರೆ ಮನೆಯಲ್ಲಿ ಹಲ್ಲಿ, ಜಿರಳೆಗಳೆಲ್ಲ ಇವೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಹಲವು ತಿಂಗಳುಗಳಿಂದಲೂ ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಪ್ರಕಟಿಸುತ್ತಲೇ ಇದ್ದಾರೆ ನಟಿ ವಿಜಯಲಕ್ಷ್ಮಿ. ತಮ್ಮ ಅಕ್ಕನಿಗೆ ಆರೋಗ್ಯ ಸರಿಯಿಲ್ಲ, ತಮಗೆ ಆರೋಗ್ಯ ಸರಿಯಿಲ್ಲ ಸಹಾಯ ಮಾಡಿ ಎಂದು ಗೋಗರೆಯುತ್ತಲೇ ಇದ್ದಾರೆ. ದರ್ಶನ್, ಯಶ್, ಶಿವರಾಜ್ ಕುಮಾರ್ ಅವರುಗಳು ತಮಗೆ ಸಹಾಯ ಮಾಡಬೇಕು ಎಂದು ಸಹ ಕೇಳಿಕೊಂಡಿದ್ದಾರೆ. ನಟ ಜಗ್ಗೇಶ್ ವಿರುದ್ಧ ಕೆಲವು ಆರೋಪಗಳನ್ನೂ ಸಹ ಮಾಡಿದ್ದಾರೆ.