ಭಾರತದಲ್ಲಿ ಕ್ರಿಕೆಟ್ ಆರಾದ್ಯ ದೈವ. ಕ್ರಿಕೆಟ್ ಜೊತೆ ಜನರ ಭಾವನೆಗಳು ಮಿಳಿತವಾಗಿವೆ. 1932ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ಆಡಿದ ಭಾರತ ಸಾಕಷ್ಟು ದಾಖಲೆಗಳ ಇತಿಹಾಸವನ್ನು ಸೃಷ್ಟಿಸಿದೆ. ಟೀಮ್ ಇಂಡಿಯಾದ ಮೊದಲ ನಾಯಕ ಸಿಕೆ ನಾಯ್ಡುಯಿಂದ ಹಿಡಿದು ಇಂದಿನ ನಾಯಕ ವಿರಾಟ್ ಕೊಹ್ಲಿವರೆಗೂ ಅನೇಕ ನಾಯಕರನ್ನು ತಂಡ ಕಂಡಿದೆ. ಬಹುತೇಕರು ಯಶಸ್ಸು ಕಂಡಿದ್ದರೆ, ಕೆಲವರು ಹೇಳಿಕೊಳ್ಳುವಂತಹ ಸಕ್ಸಸ್ ಕಾಣದಿದ್ದರೂ ಇಂದು ಭಾರತೀಯ ಕ್ರಿಕೆಟ್ ಇಷ್ಟೊಂದು ಎತ್ತರದಲ್ಲಿರಲು ಅವರೆಲ್ಲರ ಕೊಡುಗೆ ಕೂಡ ಅಪಾರ.
ಟೆಸ್ಟ್, ಏಕದಿನ ಮತ್ತು ಟಿ20 ಮೂರೂ ಮಾದರಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿಯಾದ ವಿರಾಟ್ ಕೊಹ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆದರೆ. ಈ ನಡುವೆ ಬಿಸಿಸಿಐ ವಿರಾಟ್ ಕೊಹ್ಲಿಯನ್ನಲ್ಲದೆ ಮತ್ತೊಬ್ಬ ನಾಯಕರನ್ನು ನೇಮಕ ಮಾಡಲು ಪ್ಲ್ಯಾನ್ ಮಾಡಿದೆ. ಸದ್ಯದಲ್ಲೇ ಟೀಮ್ ಇಂಡಿಯಾಕ್ಕೆ ಒಬ್ಬರಲ್ಲ.. ಇಬ್ಬರು ನಾಯಕರು ಆಗುವ ಸಾಧ್ಯತೆ ಹೆಚ್ಚಿದೆ. ವಿರಾಟ್ ಕೊಹ್ಲಿ ಅಲ್ಲದೆ ಮತ್ತೊಬ್ಬ ನಾಯಕ ಸದ್ಯ ಟೀಮ್ ಇಂಡಿಯಾದ ಉಪ ನಾಯಕರಾಗಿರುವ ಡಬಲ್ ಸೆಂಚುರಿ ಸ್ಟಾರ್ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ತಂಡವನ್ನು ಮುನ್ನಡೆಸಲಿದ್ದಾರೆ.
ಸದ್ಯ ಮತ್ತೆ ಈ ಇಬ್ಬರು ನಾಯಕರ ನೇಮಕ ವಿಚಾರದ ಚರ್ಚೆ ಬಿಸಿಸಿಐನಲ್ಲಿ ಮುನ್ನೆಲೆಗೆ ಬಂದಿದೆ. ನಾಯಕ ವಿರಾಟ್ ಕೊಹ್ಲಿ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂತಹದ್ದೊಂದು ಚಿಂತನೆ ನಡೆದಿದೆ. ಆ ಪ್ರಕಾರ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದರೆ, ರೋಹಿತ್ ಶರ್ಮಾ ಟಿ20 ತಂಡದ ಚುಕ್ಕಾಣಿ ಹಿಡಿಯಲ್ಲಿದ್ದಾರೆ.
ಕೊಹ್ಲಿಯ ಹಿತದೃಷ್ಟಿಯಿಂದ ಬಿಸಿಸಿಐ ಇಂತಹ ನಿರ್ಧಾರಕ್ಕೆ ಮುಂದಾದರೂ ಕೊಹ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡರೆ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.