No menu items!
12.3 C
Munich
Thursday, April 30, 2026

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕೊಡಿಸಿದ ವಕೀಲೆ ಸೀಮಾ ಸಮೃದ್ಧಿ ಕುಶ್ವಾಹ ಬಗ್ಗೆ ನಿಮಗೆಷ್ಟು ಗೊತ್ತು?

Must read

ಅದು 2012 ಡಿಸೆಂಬರ್ 16… ಬಣ್ಣ ಬಣ್ಣದ ಕನಸುಗಳನ್ನು ಹೊತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 6 ಮಂದಿ ಕಾಮಾಂಧರ ಕ್ರೌರ್ಯಕ್ಕೆ ಬಲಿಯಾಗಿದ್ದಳು..! ಆ ರಾತ್ರಿ ಚಲಿಸುವ ಬಸ್ಸಲ್ಲಿ ಆರು ಮಂದಿ ಕಾಮ ಪಿಶಾಚಿಗಳು ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು… ಆಕೆಯ ಗುಪ್ತಾಂಗಕ್ಕೆ ರಾಡಿನಿಂದ ಚುಚ್ಚಿ ಬಸ್​ನಿಂದ ಹೊರದಬ್ಬಿದ್ದರು..! ಆಸ್ಪತ್ರೆಗೆ ದಾಖಲಾಗಿ ಸಾವು – ಬದುಕಿನ ನಡುವೆ ಹೋರಾಡಿ ಆಕೆ ಕೊನೆಯುಸಿರೆಳೆದಳು..! ಆ ಅಮಾನವೀಯ ಕೃತ್ಯದ ಸುದ್ದಿ ಹೊರ ಬಂದಂತೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು…. ಇಡೀ ಜಗತ್ತನ್ನು ಆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಚ್ಚಿಬೀಳಿಸಿತ್ತು! ಕಾಮಾಂಧರಿಗೆ ಶಿಕ್ಷೆಯಾಗಬೇಕೆಂದು ಇಡೀ ವಿಶ್ವವೇ ಒಕ್ಕೂರಲಿನಿಂದ ಒತ್ತಾಯಿಸಿತ್ತು…
ಆ ಕ್ರೌರ್ಯ ನಡೆದು ಇದೀಗ 7 ವರ್ಷ 3 ತಿಂಗಳು. ಪ್ರಕರಣದ 6 ಅಪರಾಧಿಗಳಲ್ಲಿ 2013ರಲ್ಲಿ ರಾಮ್​ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನೊಬ್ಬ ಅಪರಾಧಿ ಕೃತ್ಯ ನಡೆದಾಗ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ. ಇಂದು ಉಳಿದ ನಾಲ್ವರು ಅಪರಾಧಿಗಳಾಗಿದ್ದ ವಿನಯ್ ಕುಮಾರ್, ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್ ಹಾಗೂ ಪವನ್ ಗುಪ್ತಾ ಗಲ್ಲಿಗೇರಿದ್ದಾರೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುತ್ತಿದ್ದಂತೆ ಇಡೀ ದೇಶ ಸಂಭ್ರಮಿಸಿದೆ.
ಆದರೆ, ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಮಾಡಿದ್ದು ಒಬ್ಬ ಮಹಿಳಾ ವಕೀಲೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ… ನಿರ್ಭಯಾ ಕುಟುಂಬದ ಪರ ಮನೆ ಮಗಳಂತೆ ನಿಂತು ಅತ್ಯಾಚಾರಿಗಳಿಗೆ ಗಲ್ಲಾಗುವಂತೆ ನೋಡಿಕೊಂಡ ಆ ವಕೀಲೆಯ ಬಗ್ಗೆ ಇಲ್ಲಿದೆ ಹೇಳ್ತೀವಿ… ಕೇಳಿ..
ಹೌದು 2012ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗುವಂತೆ ಹೋರಾಟ ನಡೆಸಿ, ಯಶಸ್ವಿಯಾದ ವಕೀಲೆ ಹೆಸ್ರು ಸೀಮಾ ಸಮೃದ್ಧಿ ಕುಶ್ವಾಹ ಅಂತ. ನಿಮ್ಗೆ ಗೊತ್ತಾ? ಉತ್ತರ ಪ್ರದೇಶದ ಲಕ್ನೋದ ಸೀಮಾ ಅವರಿಗಿದು ಮೊದಲ ಕೇಸ್..! ಅದೇ ಅಪರಾಧಿಗಳ ಪರ ವಾದಿಸಿದ್ದ ವಕೀಲ ಎ ಪಿ ಸಿಂಗ್ ಅನೇಕ ಪ್ರಕರಣಗಳಲ್ಲಿ ಗೆದ್ದಿದ್ದ ಅನುಭವಿ ವಕೀಲರು… ಅಂಥಾ ವಕೀಲರ ಎದುರು ಬಹು ದೊಡ್ಡ ಪ್ರಕರಣದಲ್ಲಿ ಯಶಸ್ವಿಯಾದ ಸೀಮಾ ಅವರಿಗೆ ಇಂದು ಇಡೀ ದೇಶದ ಜನ ತಲೆಬಾಗಿದ್ದಾರೆ…ಪ್ರತಿ ಮನೆ ಮನೆಯ ಹಿರಿಯರ ಆಶೀರ್ವಾದರ ಅವರಿಗೆ ಬಯಸದೆ ಒಲಿದಿದೆ.


ದೆಹಲಿ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದಿರುವ ಸೀಮಾ ಸಮೃದ್ಧಿ ಕುಶ್ವಾಹ 2012ರಲ್ಲಿ ನಿರ್ಭಯಾ ಪ್ರಕರಣ ನಡೆದಾಗ ಕೋರ್ಟ್​ನಲ್ಲಿ ಟ್ರೈನಿಯಾಗಿ ಸೇರಿಕೊಂಡಿದ್ದರು. ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ಆ ಸಮಯದಲ್ಲಿ ದೇಶವ್ಯಾಪಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸೀಮಾ ಕುಶ್ವಾಹ ಸಹ ಪಾಲ್ಗೊಂಡಿದ್ದರು. ನಿರ್ಭಯಾ ತಾಯಿಯ ಮನೆಗೆ ಹೋಗಿ ಸಾಂತ್ವನ ಹೇಳಿದ್ದ ಸೀಮಾ ತಾನೇ ಈ ಕೇಸನ್ನು ಉಚಿತವಾಗಿ ನಡೆಸುವುದಾಗಿ ಹೇಳಿದರು. ಸೀಮಾ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸುತ್ತಾರೆಂಬ ವಿಶ್ವಾಸ ಹಾಗೂ ನಂಬಿಕೆಯಿಂದ ನಿರ್ಭಯಾಳ ಕುಟುಂಬಸ್ಥರು ಇದಕ್ಕೆ ಒಪ್ಪಿ, ಈ ಕೇಸನ್ನು ಸೀಮಾಗೆ ನೀಡಿದ್ದರು.. ಹೇಳಿದಂತೆ ನಯಾಪೈಸೆ ಪಡೆಯದೆ ಕೇಸನ್ನು ಮುನ್ನಡೆಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಿಸುವ ಮೂಲಕ ನ್ಯಾಯ ಕೊಡಿಸಿದ್ದಾರೆ.
2014ರಲ್ಲಿ ಜ್ಯೋತಿ ಲೀಗಲ್ ಟ್ರಸ್ಟ್​ ಸೇರಿದ ಸೀಮಾ ಸಮೃದ್ಧಿ ಕುಶ್ವಾಹ ನಿರ್ಭಯಾ ಕುಟುಂಬದ ಪರವಾಗಿ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದರು. ಸತತ ಮೂರು ಬಾರಿ ಗಲ್ಲುಶಿಕ್ಷೆಯಿಂದ ಬಚಾವಾಗಿದ್ದ ನಾಲ್ವರು ಹಂತಕರು ಕೊನೆಗೂ ಇಂದು ನೇಣುಕಂಬವೇರಿದ್ದಾರೆ. ನಿನ್ನೆ ಮಧ್ಯರಾತ್ರಿಯವರೆಗೂ ನೇಣಿನ ಕುಣಿಕೆಯಿಂದ ಬಚಾವಾಗಲು ನಾಲ್ವರು ಹಂತಕರು ಹರಸಾಹಸ ಪಟ್ಟಿದ್ದರು. ತಮ್ಮ ಕಕ್ಷಿದಾರರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ವಕೀಲ ಎ.ಪಿ. ಸಿಂಗ್ ನಡೆಸಿದ ಎಲ್ಲ ಪ್ರಯತ್ನಗಳೂ ಕೂಡ ವಿಫಲವಾಗಿ, ಸೀಮಾ ಹೋರಾಟಕ್ಕೆ ಜಯಸಿಕ್ಕಿದೆ. ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. 7 ವರ್ಷದ ಬಳಿಕ ಕಾಮಾಂಧರಿಗೆ ಶಿಕ್ಷೆಯಾಗುತ್ತಿದ್ದಂತೆ ಸೀಮಾ ಹೆಸ್ರು ಟ್ವಿಟ್ಟರ್ನಲ್ಲಿ ಟ್ರೆಂಡಿಂಗಲ್ಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article