ದೇಶದಲ್ಲಿ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚಿನ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಇತ್ತೀಚಿಗೆ ರೂಪುಗೊಂಡಿರುವ ವಾಯುಭಾರ ಕುಸಿತ ಮಳೆ ಪ್ರಮಾಣದ ಏರಿಕೆಗೆ ಕಾರಣವಾಗಲಿದೆ. ಇದರಿಂದಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕಡಿಮೆಯಾಗಬೇಕಿದ್ದ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರ ನಡುವಿನ ಅವಧಿಯನ್ನು ಭಾರತದಲ್ಲಿ ನೈಋತ್ಯ ಮುಂಗಾರು ಅವಧಿ ಎಂದು ಕರೆಯಲಾಗುತ್ತದೆ. ಆಗಸ್ಟ್ ಅಂತ್ಯದವರೆಗೂ ಕುಂಠಿತವಾದ ಮಳೆ ಪ್ರಮಾಣ ಭಾರತದಲ್ಲಿ ಬರ ಪರಿಸ್ಥಿತಿ ತರಬಹುದೇ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಬಾರಿ ನೈಋತ್ಯ ಮುಂಗಾರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದ್ದು, 19 ವರ್ಷಗಳಲ್ಲೇ ದಾಖಲಾದ ಕನಿಷ್ಠ ಮಳೆ ಪ್ರಮಾಣ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆಗಸ್ಟ್ ತಿಂಗಳ ಅವಧಿಯಲ್ಲಿ, ಇಡೀ ದೇಶಾದ್ಯಂತ ಮಳೆಯು ದೀರ್ಘಾವಧಿ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ, ಅಂದರೆ 24% ಮಳೆ ಕೊರತೆ ಕಂಡುಬಂದಿದೆ. 2002ರ ನಂತರ, ಕಳೆದ 19 ವರ್ಷಗಳಲ್ಲಿ ದಾಖಲಾದ ಅತಿ ಕನಿಷ್ಠ ಮಳೆ ಪ್ರಮಾಣ ಇದಾಗಿದೆ.