ನಿನ್ನೆ ಮುಖ್ಯಮಂತ್ರಿ ಹುದ್ದೆ ಕುರಿತು ಮಾಜಿ-ಹಾಲಿ ಮುಖ್ಯಮಂತ್ರಿಗಳ ನಡುವೆ ಟ್ವೀಟರ್ ವಾರ್ ನಡೆದಿತ್ತು. ಇಂದು ನಾಥರಾಮ್ ಗೋಡ್ಸೆ ಕುರಿತು ಬಿಜೆಪಿ ಸಂಸದರು ಮಾಡಿರುವ ಟ್ವೀಟ್ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡಿದೆ.
ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಸಿಂಗ್ , ಸಂಸದ ನಳೀನ್ ಕುಮಾರ್ ಕಟೀಲ್ ಅವರು ನಾಥರಾಮ್ ಗೋಡ್ಸೆ ಕುರಿತಂತೆ ಮಾಡಿದ ಟ್ವೀಟ್ಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದು, ಕಾಂಗ್ರೆಸಿಗರು ಬಿಜೆಪಿಯ ನಾಯಕರ ಟ್ವೀಟ್ ವಿರುದ್ದ ಮುಗಿಬಿದ್ದಿದ್ದಾರೆ.
ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎರಡು ದಿನಗಳಿಂದ ನಡೆಯುತ್ತಿರುವ ಟ್ವೀಟ್ ವಿವಾದವನ್ನು ಗಮನಿಸಿದ್ದೇನೆ.
ಇದು ಅವರ ವೈಯಕ್ತಿಕ ವಿಚಾರ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲಅವರ ಹೇಳಿಕೆಗಳ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಲಾಗುವುದು. ಪ್ರಕರಣವನ್ನು ಶಿಸ್ತು ಸಮಿತಿಗೆ ಒಪ್ಪಿಸಲಾಗುವುದು ಎಂದು ಹೇಳುವ ಮೂಲಕ ವಿವಾದದಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ.
ಈ ಎಲ್ಲದಕ್ಕಿಂತ ಮೊದಲು ತಮಿಳುನಾಡಿನ ನಟ ಹಾಗೂ ರಾಜಕಾರಣಿ ಕಮಲಹಾಸನ್ ಅವರು, ನಾಥರಾಮ್ ಗೋಡ್ಸೆಯನ್ನು ದೇಶದ ಮೊದಲ ಹಿಂದೂ ಉಗ್ರ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಅವರು, ನಾಥರಾಮ್ ಗೋಡ್ಸೆ ಅವರನ್ನು ದೇಶ ಭಕ್ತ ಎಂದು ಕರೆದಿದ್ದರು.
ಸಂಸದ ನಳೀನ್ಕುಮಾರ್ ಕಟೀಲ್ ಅವರು ನಾಥರಾಮ್ ಗೋಡ್ಸೆ ಕೊಂದವ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ಗಾಂಧಿ ಕೊಂದವರ ಸಂಖ್ಯೆ 17 ಸಾವಿರ. ಇದರಲ್ಲಿ ನೀವೇ ಹೇಳಿ ಇದರಲ್ಲಿ ಅತೀ ಕ್ರೂರ ಕೊಲೆಗಾರ ಯಾರು ಎಂದು ಪ್ರಶ್ನಿಸಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಗೋಡ್ಸೆ ಸಂಘಪರಿವಾರದ ಸಿದ್ದಾಂತದಿಂದ ಪ್ರೇರಿಪಿತರಾದವರು. ಈಗ ಪ್ರಜ್ಞಾ. ಈ ಮೊದಲು ಗೋಡ್ಸೆ ಮಹಾತ್ಮರನ್ನು ಕೊಂದರು. ಈಗ ಮಹಾತ್ಮರ ಮಕ್ಕಳನ್ನು ಅರ್ಥಾತ್ ಅವರ ಆದರ್ಶಗಳನ್ನು ಕೊಲ್ಲಲಾಗುತ್ತಿದೆ.