ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯ ನಿವಾಸಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಅವರ ಪುತ್ರಿ ಇದೀಗ ತಮಿಳುನಾಡು ಸಿಎಂ ಅವರ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
1981 ಆಗಸ್ಟ್ 31 ಗೌರಿಬಿದನೂರು ನಗರದಲ್ಲಿ ಜನಿಸಿದ ಶಿಲ್ಪಾ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮತ್ತು ಪದವಿಪೂರ್ವ ಶಿಕ್ಷಣವನ್ನು ನ್ಯಾಷನಲ್ ಕಾಲೇಜ್ನಲ್ಲಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ LLB ಪದವಿ ಪಡೆದುಕೊಳ್ಳುತ್ತಾರೆ. ಇದಾದ ಬಳಿಕ UPSC ಪರೀಕ್ಷೆಯಲ್ಲಿ 46ನೇ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದರು. 2018ರಲ್ಲಿ ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಅವರು ಅಧಿಕಾರ ಸ್ವೀಕಾರ ಮಾಡಿದ್ದರು.
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಮೊದಲು ತಮಿಳುನಾಡಿನ ಅಂಗನವಾಡಿ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಅಂಗನವಾಡಿ ಮಾಡಲು ನಿರ್ಧರಿಸಿ ತಮ್ಮ ಮೂರು ವರ್ಷದ ಹೆಣ್ಣುಮಗುವನ್ನು ಅಂಗನವಾಡಿಗೆ ಸೇರಿಸುತ್ತಾರೆ. ಇದರ ಜತೆಗೆ ಇತರ ಅಧಿಕಾರಿಗಳಿಗೆ ಹುಬ್ಬೇರುವಂತೆ ಮಾಡಿ ದೇಶಾದ್ಯಂತ ಮಾದರಿಯಾಗಿದ್ದರು.
ಶಿಲ್ಪಾ ಪ್ರಭಾಕರ್ ಅವರು, 2013ರಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ಲಾಸ್ಟಿಕ್ ಬ್ಯಾನ್ ಮಾಡುವ ವಿಚಾರದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕೀರ್ತಿ ಸಲ್ಲುತ್ತದೆ. ತಮಿಳುನಾಡಿನ ನೂತನ ಮುಖ್ಯ ಮಂತ್ರಿಗಳು ಇವರ ಕಾರ್ಯವೈಖರಿಯನ್ನು ಮೆಚ್ಚಿ ಸಿಎಂ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದ್ದಾರೆ. ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಣ್ಣುಮಗಳಿಗೆ ಈ ಹುದ್ದೆ ಅರಿಸಿ ಬಂದಿರುವುದಕ್ಕಾಗಿ ಇದೀಗ ಗೌರಿಬಿದನೂರು ತಾಲೂಕಿನಾದ್ಯಂತ ಅಭಿನಂದನೆಗಳ ಸುರಿಮಳೆಯಾಗ್ತಿದೆ.