ಶಿಖರ್ ಧವನ್ (98 ರನ್)ಅದ್ಭುತ ಬ್ಯಾಟಿಂಗ್ ಹಾಗೂ ಕನ್ನಡಿಗ ಪ್ರಸಿದ್ದ್ ಕೃಷ್ಣ(54ಕ್ಕೆ 4) ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ 66 ರನ್ಗಳಿಂದ ಗೆದ್ದು ಬೀಗಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಪಡೆಯಿತು.
318 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಪರ ಆರಂಭಿಕರಾಗಿ ಬಂದ ಜೇಸನ್ ರಾಯ್ ಹಾಗೂ ಜಾನಿ ಬೈರ್ಸ್ಟೋವ್ ಜೋಡಿ, ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಮೊದಲನೇ ವಿಕೆಟ್ಗೆ 135 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿತು. ಈ ವೇಳೆ ಭಾರತ ತಂಡ ಸಾಕಷ್ಟು ಒತ್ತಡಕ್ಕೆ ಒಳಗಾಗಿತ್ತು. ಆದರೆ, 35 ಎಸೆತಗಳಲ್ಲಿ 46 ರನ್ ಗಳಿಸಿ ಆಡುತ್ತಿದ್ದ ಜೇಸನ್ ರಾಯ್ ಹಾಗೂ ಬೆನ್ ಸ್ಟೋಕ್ಸ್ (1) ಅವರ ಎರಡು ಪ್ರಮುಖ ವಿಕೆಟ್ಗಳನ್ನು ಪ್ರಸಿದ್ದ್ ಕೃಷ್ಣ ಉರುಳಿಸಿ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು.
ಒಂದು ತುದಿಯಲ್ಲಿ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಜಾನಿ ಬೈರ್ಸ್ಟೋವ್ 66 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 94 ರನ್ ಗಳಿಸಿದ್ದರು. ಆ ಮೂಲಕ ಇಂಗ್ಲೆಂಡ್ಗೆ ಗೆಲುವು ತಂದುಕೊಡುವ ಪ್ರಯತ್ನದಲ್ಲಿ ಇದ್ದರು. ಆದರೆ, ಶಾರ್ದುಲ್ ಠಾಕೂರ್ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಕುಲ್ದೀಪ್ ಯಾದವ್ಗೆ ಕ್ಯಾಚ್ ನೀಡಿದರು.
ಇದರ ಬೆನ್ನಲ್ಲೆ ನಾಯಕ ಐಯಾನ್ ಮಾರ್ಗನ್ (22), ಜೋಸ್ ಬಟ್ಲರ್ ಅವರನ್ನು ಶಾರ್ದುಲ್ ಠಾಕೂರ್ ಔಟ್ ಮಾಡಿದರು. ಮೊಯಿನ್ ಅಲಿ 30 ರನ್ ಗಳಿಸಿ ಇಂಗ್ಲೆಂಡ್ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್ ಎದುರು ಅಲಿ ಆಟ ನಡೆಯಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 42.1 ಓವರ್ಗಳಿಗೆ 251 ರನ್ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.