No menu items!
11.1 C
Munich
Wednesday, April 29, 2026

ಮಾಸ್ಕ್ ಧರಿಸದಿದ್ರೆ ಕ್ರಿಮಿನಲ್ ಕೇಸ್

Must read

ನಾಲ್ಕು ಅಂಗಡಿಗಳಿಗೆ 5000 ರೂ. ದಂಡ ವಿಧಿಸಿರುವ ಡಿಸಿ, ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ ಸೇನಾ ನೇಮಕಾತಿ ರ್ಯಾಲಿಗೆ ಬಂದಿದ್ದ ಯುವಕರನ್ನು ತಡೆದು ನಿಲ್ಲಿಸಿ, ಕೊರೊನಾ ಅಂದರೇನು? ಮಾಸ್ಕ್ ಹೇಗೆ ಧರಿಸಬೇಕೆಂದು ಪ್ರಶ್ನಿಸಿ 100 ರೂ. ದಂಡ ವಿಧಿಸಿದರು.

ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ, ಡಿವೈಎಸ್ ಪಿ ಸದಾನಂದ ನಾಯಕ್ ಸಹಿತ ಅಧಿಕಾರಿಗಳು ಸಿಡಿ ರೌಂಡ್ಸ್ ಬಂದಾಗ ಶೇ. 80ಕ್ಕೂ ಅಧಿಕ ಮಂದಿ ಮಾಸ್ಕ್ ಧರಿಸದೇ ಇರುವುದು, ತಪ್ಪಾಗಿ ಮಾಸ್ಕ್ ಧರಿಸುವುದು ಕಂಡು ಬಂತು. ಬಸ್ ಚಾಲಕರು, ನಿರ್ವಾಹಕರೇ ಮಾಸ್ಕ್ ಹಾಕುತ್ತಿಲ್ಲ. ಯುವಕ-ಯುವತಿಯರು ಪ್ಯಾಂಟ್, ಬ್ಯಾಗ್‍ನಲ್ಲಿ ಮಾಸ್ಕ್ ಇಟ್ಟುಕೊಂಡು ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೂಲಿ ಕಾರ್ಮಿಕರು, ಮದ್ಯಪಾನ ವ್ಯಸನಿಗಳು ಮಾಸ್ಕ್ ಹಾಕದೇ ಬಾಯಿಗೆ ಬಟ್ಟೆ, ಕರವಸ್ತ್ರ ಮುಚ್ಚಿಕೊಂಡರು.

ಸರ್ವೀಸ್ ಬಸ್‍ನಿಲ್ದಾಣಕ್ಕೆ ಭೇಟಿಕೊಟ್ಟ ಜಿಲ್ಲಾಧಿಕಾರಿ ಜಿ. ಜಗದೀಶ್ ಆರಂಭದಲ್ಲೇ ಮಾಸ್ಕ್ ಹಾಕದೇ ಓಡಾಡುತ್ತಿದ್ದ ಇಬ್ಬರು ಯುವಕರನ್ನು ತಡೆದು ನಿಲ್ಲಿಸಿದರು. ಅವರಲ್ಲಿ ಯುವಕನೋರ್ವ ಬಾಯಿಗೆ ಗುಟ್ಕಾ ಹಾಕಿಕೊಂಡಿದ್ದು, ಕೊರೊನಾ ಬಗ್ಗೆ ಹೇಳುವಂತೆ ಹೇಳಿದರು. ಕೊರೊನಾ ಈಗ ಸಾಮಾನ್ಯವಾಗಿದೆ. ಆದರೂ ಮಾಸ್ಕ್ ಕಡ್ಡಾಯವಾಗಿ ಹಾಕಬೇಕೆಂದು ಯುವಕ ಉತ್ತರಿಸಿದ್ದು, 100 ರೂ. ದಂಡ ಕಟ್ಟಿಸಿಕೊಂಡರು.

ಸರ್ವೀಸ್ ಬಸ್‍ನಿಲ್ದಾಣಕ್ಕೆ ಬರುತ್ತಿದ್ದ ಖಾಸಗಿ ಬಸ್‍ನ ಚಾಲಕನೋರ್ವರಿಗೆ ದಂಡ ವಿಧಿಸಿದ ಡಿಸಿ ಬಳಿಕ ಇನ್ನೊಂದು ಖಾಸಗಿ ಬಸ್‍ನೊಳಗೆ ಹೊಕ್ಕರು. ಚಾಲಕ ಮಾಸ್ಕ್ ಹಾಕದೇ ಇರುವುದರಿಂದ ತರಾಟೆಗೆ ತೆಗೆದುಕೊಂಡರು. ಕೆಲ ಕಾಲ ಬಸ್‍ನೊಳಗೆ ಕೊರೊನಾ ಪಾಠ ಮಾಡಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದೊಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚು ಪತ್ತೆಯಾಗುತ್ತಿದೆ. ಮಣಿಪಾಲ ಎಂಐಟಿ ಕ್ಯಾಂಪಸ್‍ನಲ್ಲಿ ಹೆಚ್ಚಿನ ಪ್ರಕರಣ ವರದಿಯಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ಕರೆದು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಮನೆಯಿಂದ ಹೊರಡುವ ಮುನ್ನ ಮಾಸ್ಕ್‌ ಧರಿಸಲೇಬೇಕು. ಮಾಸ್ಕ್ ಹಾಕದೇ ಸಾರ್ವಜನಿಕ ಸ್ಥಳಕ್ಕೆ ಬರಬಾರದು. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದ 4 ಅಂಗಡಿಗಳಿಗೆ 5000 ರೂ. ದಂಡ ವಿಧಿಸಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದರು.

 

ಸಾರ್ವಜನಿಕ ಸಭೆ, ಸಮಾರಂಭ, ಖಾಸಗಿ ಕಾರ್ಯಕ್ರಮಗಳು ಯಾವುದೂ ಕೂಡಾ ಅನುಮತಿ ಇಲ್ಲದೇ ಮಾಡಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುಮತಿ ಪಡೆದುಕೊಂಡು ಕಾರ್ಯಕ್ರಮ ಆಯೋಜಿಸಬೇಕು. ತಹಶೀಲ್ದಾರರು ಅನುಮತಿ ನೀಡುವಾಗ ಆ ಕಾರ್ಯಕ್ರಮವನ್ನು ವೀಕ್ಷಿಸುವ ಸರಕಾರಿ ಅಧಿಕಾರಿಯ ಹೆಸರನ್ನು ನಮೂದಿಸಬೇಕು. ಕಾರ್ಯಕ್ರಮದಲ್ಲಿ ಕೋವಿಡ್-19 ರ ಬಗ್ಗೆ ಅಧಿಕಾರಿ ಮಾರ್ಗಸೂಚಿ ಪಾಲನೆ ಮಾಡದೇ ಸೋಂಕು ಹರಡುವಿಕೆಗೆ ಕಾರಣವಾದರೆ ಆತನ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದೆಂದರು.

 

ಸದ್ಯಕ್ಕೆ ಮಣಿಪಾಲ ಎಂಐಟಿಯನ್ನು ಮಾತ್ರ ಕಂಟೈನ್‍ಮೆಂಟ್ ಝೋನ್ ಮಾಡಲಾಗಿದೆ. ಇನ್ನೆರಡು ಸ್ಥಳಗಳಲ್ಲಿ ಕಾಣಿಸಿಕೊಂಡಿರುವ ಸ್ಥಳವನ್ನು ಕಂಟೈನ್‍ಮೆಂಟ್ ಝೋನ್ ಮಾಡುವ ಅವಶ್ಯವಿಲ್ಲ. ಎಂಐಟಿಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಅಲ್ಲಿರುವ 5000 ವಿದ್ಯಾರ್ಥಿಗಳ ಪೈಕಿ 4000 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಒಂದೇ ದಿನ 1000 ಮಂದಿಯ ಮಾದರಿ ಸಂಗ್ರಹಿಸಿದ್ದೇವೆ. ಎಂಐಟಿಯನ್ನು ಕೊರೊನಾ ಮುಕ್ತ ಮಾಡುವುದು ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಆದ್ಯತೆ ಎಂದರು.

ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‍ಡೌನ್ ಮಾಡಬೇಕಾಗಿಲ್ಲ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದರೆ ನಿಯಂತ್ರಣ ಸಾಧ್ಯ. ಹಿಂದೆ ಒಂದು ದಿನ 400 ಪ್ರಕರಣವೂ ದಾಖಲಾಗಿದ್ದು, ಆಗಲೇ ಸಾರ್ವಜನಿಕರ ಸಹಕಾರದಿಂದ ನಿಯಂತ್ರಣ ಮಾಡಿದ್ದೇವೆ. ಶೋಭಾಯಾತ್ರೆ, ಪ್ರತಿಭಟನೆಗೆ ನಿರ್ಬಂಧವಿಲ್ಲ. ಆದರೆ ಕೋವಿಡ್ ಮಾರ್ಗಸೂಚಿ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತಡೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಅಧಿಕಾರಿಗಳ ತಂಡ ಸನ್ನದ್ಧವಾಗಿದೆ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article