ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರನ ಕಾರು ಬೈಕ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವ್ಯಾಪ್ತಿಯ ಕೂಡಲಸಂಗಮ ಕ್ರಾಸ್ ಬಳಿ ನಡೆದಿದೆ.
ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿದಂತೆ 12 ಮಂದಿ ಎರಡು ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಲಕ್ಷ್ಮಣ ಸವದಿ ಮಗ ಚಿದಾನಂದ ಕೆಎ22 ಎಂಸಿ5151 ನಂ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಸವಾರನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಆಸ್ಪತ್ರೆಗೆ ಸೇರಿದ ಕೆಲವೇ ಕ್ಷಣಗಳಲ್ಲಿ ಕೂಡಲೆಪ್ಪ ಮೃತಪಟ್ಟಿದ್ದಾರೆ.
ವಿಪರ್ಯಾಸವೆಂದರೆ ಬೈಕ್ಗೆ ಡಿಕ್ಕಿ ಬಳಿಕ ಸವಾರನನ್ನು ಆಸ್ಪತ್ರೆಗೆ ಸೇರಿಸುವ ಬದಲು ತಮ್ಮ ವಾಹನದ ನಂಬರ್ ಜಖಂಗೊಳಿಸಿ ಹೊರಡಲು ಯತ್ನಿಸಿದ್ದಾರೆ. ಚಿದಾನಂದ ಮತ್ತೊಂದು ವಾಹನದಲ್ಲಿ ತೆರಳಲು ಮುಂದಾಗಿದ್ದ. ಅಪಘಾತ ಮಾಡಿದ ಕಾರು ಯಾರದ್ದೆಂದು ತಿಳಿಯದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಸ್ಥಳೀಯರು ಚಿದಾನಂದನನ್ನು ತಪ್ಪಿಸಿಕೊಳ್ಳಲು ಬಿಡದೆ ಕೆಲಹೊತ್ತು ಹಿಡಿದು ಕೂರಿಸಿದ್ದಾರೆ.
”ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ತೆರಳುತ್ತಿದ್ದೆ. ನಾನು ತೆರಳುತ್ತಿದ್ದ ಕಾರು 30 ಕಿಲೋಮೀಟರ್ ಮುಂದಿತ್ತು. ನನ್ನ ಕಾರನ್ನು ನನ್ನ ಚಾಲಕ ಚಲಾಯಿಸುತ್ತಿದ್ದ. ನನ್ನ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಆ್ಯಂಬುಲೆನ್ಸ್ಗೆ ಶಿಫ್ಟ್ ಮಾಡುವ ವೇಳೆ ಜನರು ಬಂದಿದ್ದರು” ಎಂದು ಚಿದಾನಂದ ಹೇಳಿಕೆ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.