ದರ್ಶನ್ ಪರ ಬಿ.ಸಿ ಪಾಟೀಲ್ ಬ್ಯಾಟಿಂಗ್

admin
1 Min Read

ಬೆಂಗಳೂರು: ನಟ ದರ್ಶನ್ ಬಹಳ ಮುಗ್ಧ. ಯಾವುದೇ ಕೆಟ್ಟ ಕೆಲಸ ಮಾಡಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ‘ದಾಸ’ನ ಪರ ಬ್ಯಾಟ್ ಬೀಸಿದ್ದಾರೆ.

ದರ್ಶನ್‍ರಿಂದ ಹಲ್ಲೆ ಆರೋಪ ವಿಚಾರ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಅಂತಹ ಯಾವುದೇ ಕೆಲಸ ದರ್ಶನ್ ಮಾಡಿಲ್ಲ ಅಂತ ನನಗೆ ಮನವರಿಕೆ ಇದೆ. ದರ್ಶನ್ ಬಹಳ ಮುಗ್ಧ. ಕೆಳ ಹಂತದಿಂದ ಮೇಲೆ ಬೆಳೆದು ಬಂದವರು. ಅವರ ಏಳಿಗೆ ಸಹಿಸಲಾರದವರು ದುರುದ್ದೇಶದಿಂದ ಅವರ ಮೇಲೆ ಇಂತಹ ಕೇಸ್ ಹಾಕಿಸಿ ಆರೋಪ ಮಾಡ್ತಿದ್ದಾರೆ ಅನ್ನೋದು ನನ್ನ ಭಾವನೆ ಎಂದರು.

ದರ್ಶನ್ ಬಹಳ ಸರಳ, ದೊಡ್ಡ ಹೃದಯದ ಹುಡುಗ. ಅಂತಹ ಯಾವುದೇ ಕೆಟ್ಟ ಕೆಲಸ ಮಾಡಲ್ಲ ಅನ್ನೋದು ನನ್ನ ನಂಬಿಕೆ ಎಂದು ತಿಳಿಸಿದರು.

ತಲೆ ತೆಗೆಯುತ್ತೇನೆ ಎಂಬ ದರ್ಶನ್ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೂಡ ಅವತ್ತು ದರ್ಶನ್ ಹೇಳಿಕೆ ನೋಡಿದ್ದೇನೆ. ನೀವು ಏನೇನೋ ಕೇಳಬೇಡಿ, ಕೇಳಿದ್ರೆ ರೆಕ್ಕೆ ಪುಕ್ಕ ಬರುತ್ತೆ ಅಂತ ದರ್ಶನ್ ಅವತ್ತು ಹೇಳಿದ್ರು. ಪ್ರಚೋದನೆ ಮಾಡಿ ಪ್ರಶ್ನೆ ಕೇಳಿದ್ದಕ್ಕೆ ಆವೇಶದಲ್ಲಿ ಏನೋ ಹೇಳಿರಬಹುದು. ದರ್ಶನ್ ಹೃದಯದಿಂದ ಅಂತಹ ಮಾತು ಹೇಳೋ ವ್ಯಕ್ತಿ ಅಲ್ಲ ಎಂದು ಹೇಳಿದರು.

ಇದೇ ವೇಳೆ ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ನಟ ದರ್ಶನ್ ಕೈ ಬಿಡುವುದಿಲ್ಲ. ರಾಯಭಾರಿ ಸ್ಥಾನದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ. ರಾಯಭಾರಿ ಸ್ಥಾನದಿಂದ ಕೈ ಬಿಡುವ ಯಾವುದೇ ಕೆಲಸ ದರ್ಶನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

 

Share This Article
Leave a Comment