No menu items!
9.3 C
Munich
Wednesday, April 29, 2026

ಚೇತೇಶ್ವರ ಪೂಜಾರ ಬಗ್ಗೆ ಚೋಪ್ರಾ ಹೇಳಿದ್ದೇನು?

Must read

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯವಾಡುವ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಿಂದ ಹಿರಿಯ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಅವರನ್ನು ಕೈ ಬಿಡಲಾಗುತ್ತದೆ ಎಂಬ ವರದಿಗಳನ್ನು ನನ್ನಿಂದ ನಂಬಲು ಸಾಧ್ಯವಿಲ್ಲ ಎಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಹೇಳಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಕಳೆದ ತಿಂಗಳು ಮುಕ್ತಾಯವಾಗಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಹಣಾಹಣಿಯ ಎರಡೂ ಇನಿಂಗ್ಸ್‌ಗಳಲ್ಲಿ ಚೇತೇಶ್ವರ್‌ ಪೂಜಾರ ವೈಫಲ್ಯ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಆರಂಭಿಕ ಟೆಸ್ಟ್‌ಗೆ ಅವರ ಸ್ಥಾನಕ್ಕೆ ಕೆ.ಎಲ್‌ ರಾಹುಲ್‌ ಅಥವಾ ಹನುಮ ವಿಹಾರಿ ಅವರನ್ನು ಆಡಿಸಬಹುದೆಂದು ಈ ಹಿಂದೆ ವರದಿಗಳು ತಿಳಿಸಿದ್ದವು.

“ಚೇತೇಶ್ವರ್‌ ಪೂಜಾರ ಅವರನ್ನು ಆರಂಭಿಕ ಟೆಸ್ಟ್‌ಗೆ ಕೈ ಬಿಡಲಾಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಈ ಸುದ್ದಿಯನ್ನು ನಾನು ನಂಬುವುದಿಲ್ಲ. ಏಕೆಂದರೆ, ಕೊನೆಯ ಇಂಗ್ಲೆಂಡ್‌ ಪ್ರವಾಸದಲ್ಲಿ ಅವರು ಶತಕ ಸಿಡಿಸಿದ್ದರು. ಹೌದು, ಇಂಗ್ಲೆಂಡ್‌ ಪ್ರವಾಸದಲ್ಲಿ 30ರ ಸರಾಸರಿಗಿಂತ ಅವರು ಕಡಿಮೆ ರನ್‌ ಗಳಿಸಿದ್ದಾರೆ ಎಂದು ನೀವು ಪರಿಗಣಿಸಬಹುದು. ಆದರೆ, ಅವರು ಇಂಗ್ಲೆಂಡ್‌ ಪ್ರವಾಸ ಮಾಡಿರುವುದು 2 ಅಥವಾ 3 ಬಾರಿ ಅಷ್ಟೇ,” ಎಂದರು. ತಮ್ಮ ರಕ್ಷಣಾತ್ಮಕ ಬ್ಯಾಟಿಂಗ್‌ನಿಂದ ಚೇತೇಶ್ವರ್‌ ಪೂಜಾರ ಸಾಕಷ್ಟು ಬಾರಿ ಟೀಮ್‌ ಇಂಡಿಯಾಗೆ ಸಹಾಯವಾಗಿದ್ದಾರೆ. ಇದನ್ನು ಪರಿಗಣಿಸಿ ಅವರಿಗೆ ಅವಕಾಶ ನೀಡಬೇಕೆಂದು ಅವರು ಹೇಳಿದ್ದಾರೆ. “ಇತ್ತೀಚೆಗೆ ಮುಕ್ತಾಯವಾಗಿದ್ದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ನಿರೀಕ್ಷೆ ಮಾಡಿದಷ್ಟು ರನ್‌ ಗಳಿಸಿಲ್ಲ ನಿಜ. ಆದರೆ, ಅವರ ಬ್ಯಾಟಿಂಗ್‌ ಶೈಲಿ ತಂಡಕ್ಕೆ ತುಂಬಾ ಮುಖ್ಯವಾಗಿದೆ. ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಆದರೆ, ಸಾಕಷ್ಟು ಬಾರಿ ಅದೇ ರೀತಿ ಆಡಿ ಅವರು ತಂಡಕ್ಕೆ ನೆರವಾಗಿದ್ದಾರೆ,” ಎಂದು ಚೋಪ್ರಾ ಹಿರಿಯ ಆಟಗಾರನನ್ನು ಸಮರ್ಥಿಸಿಕೊಂಡರು. ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಹಾಗೂ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಗಳಲ್ಲಿ ಚೇತೇಶ್ವರ್‌ ಪೂಜಾರ ಸನ್ನಿವೇಶಕ್ಕೆ ತಕ್ಕಂತೆ ಆಸೀಸ್‌ ಬೆಂಕಿ ಚೆಂಡುಗಳನ್ನು ಎದುರಿಸಿದ್ದರು. ಆ ಮೂಲಕ ಎರಡನೇ ಬಾರಿ ಕಾಂಗರೂಗಳ ನಾಡಿನಲ್ಲಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಗೆಲುವಿಗೆ ಭಾರತಕ್ಕೆ ನೆರವಾಗಿದ್ದರು. ಅವರು ತಂಡದಲ್ಲಿದ್ದರೆ, ಅತ್ಯುತ್ತಮ ಸಂಯೋಜನೆಯನ್ನು ತಂದುಕೊಡುತ್ತಾರೆಂಬುದರಲ್ಲಿ ಯಾವುದೇ ಅನುಮಾನವಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article